Friday 7 March, 2008

ಸಂಧ್ಯಾ - ಬಾಲ್ಯದ ದಿನಗಳು


[ ಮೊದಲ ಬಾರಿಗೆ ಒಂದು ಸಣ್ಣ ಕಥೆ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದಯವಿಟ್ಟು ಓದಿ. ತುಂಬು ಮನದಿಂದ ನಿಮ್ಮ ಸಲಹೆಗಳನ್ನು ಕೊಡಿ. ತುಂಬು ಹೃದಯದಿಂದ ಸ್ವೀಕರಿಸುತ್ತೇನೆ.]


ಒಂಬತ್ತು ವರ್ಷದ ಹುಡುಗಿ ಸಂಧ್ಯಾ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾಳೆ. ಮರು ವಿವಾಹ ಆಗದೆ ಅವಳ ತಂದೆಯು, ಪೇಟೆಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಾ ಇದ್ದಾನೆ. ಅವಳ ಶಾಲೆಯು ಮನೆಯ ಹತ್ತಿರದಲ್ಲೇ ಇದ್ದುದ್ದರಿಂದ ಅವಳಿಗೆ ಸಂಜೆಯ ವೇಳೆ ಹೆಚ್ಚಿನ ಸಮಯ ಸಿಗುತ್ತಿತ್ತು. ಅವಳ ಗೆಳತಿಯರಾದ ಅನು ಹಾಗು ಸೀತಾರೊಡನೆ ಆಟವಾಡುತ್ತಾ, ಪಾಠ ಓದುತ್ತಾ ದಿನ ಕಳೆಯುತ್ತಿದ್ದಳು.

ಒಂದು ದಿನ, "ಅನು, ಇವತ್ತು ಯಾವ ಆಟ ಆಡೋಣ?"
"ಲೇ! ಸಂಧ್ಯಾ, ಇವತ್ತು ಕುಂಟೆ ಬಿಲ್ಲೆ ಆಡೋಣ ಕಣೆ"
"ಸರಿ ಕಣೆ"
ಸ್ವಲ್ಪ ಸಮಯದ ನಂತರ, ಸೀತಾಳ ತಾಯಿ, ಶಾಂತ, "ಸೀತಾ, ಬಾರೆ ಮನೆಗೆ. ಇವತ್ತು ಆಡಿದ್ದು ಸಾಕು"
ಸಂಧ್ಯಾ, "ಯಾಕೆ ಸೀತಾ, ಏನು ಕೆಲ್ಸ ಇದೆ ನಿನಗೆ? ಇಷ್ಟು ಬೇಗ ನಿಮ್ಮ ಅಮ್ಮ ಕರಿತಾ ಇದ್ದರೆ."
"ಏನಿಲ್ಲ ಕಣೆ. ಪರೀಕ್ಷೆ ಹತ್ತಿರ ಇದೆ ಅಲ್ವಾ , ಅದಕ್ಕೆ ನಮ್ಮ ಓದಿನ ಸಮಯ ಹೆಚ್ಚಿಸ್ಕೋಬೇಕು. ನಾನು ಮನೆಗೆ ಹೋಗ್ತೀನಿ. ನಾಳೆ ಸಿಗ್ತೀನಿ."
"ಅನು, ನಿಮ್ಮಮ್ಮ ಕರಿಯಲ್ವಾ ನಿನ್ನ?"
"ಅಯ್ಯೋ! ಅವರು ಊರಲ್ಲೇ ಇಲ್ಲ ಕಣೆ. ನಮ್ಮಜ್ಜಿ ಮನೆಗೆ ಹೋಗಿದ್ದಾರೆ"
ಸಂಧ್ಯಾ, "ನನ್ನ ಕರಿಯೋಕೆ ನಮ್ಮಮ್ಮ ಇಲ್ಲ ಕಣೆ" ಅಂತ ಅಳಲನ್ನು ತೋರಿಕೊಂಡಳು. ತಾಯಿಯಿಲ್ಲದ ದುಃಖ ಅವಳ ಮುಖದಲ್ಲಿ ಈಗಾಗಲೇ ಕಾಣುತ್ತಿತ್ತು. ಇದಕ್ಕೆ ಕಣ್ಣೀರೇ ಸಾಕ್ಷಿ ಆಗಿತ್ತು.

"ಸಂಧ್ಯಾ, ನನಗೆ ಹೊಟ್ಟೆ ಹಸಿವು ಕಣೆ. ನಿಮ್ಮ ಮನೇಲಿ ಏನಾದ್ರು ಇದ್ದರೆ ಕೊಡೆ"
"ಹು. ನಮಪ್ಪ ಅಡುಗೆ ಚೆನ್ನಾಗಿ ಮಾಡ್ತಾರೆ! ಹುರಳಿಕಾಯಿ ಹುಳಿ ಮಾಡಿದ್ದಾರೆ. ಬಾ ಇಬ್ಬರು ಸ್ವಲ್ಪ ತಿನ್ನೋಣ"
ಇಬ್ಬರು ತಟ್ಟೆಗೆ ಅನ್ನ, ಹುಳಿ ಬಡಿಸಿಕೊಂಡು ತಿನ್ನಲು ಆರಂಭಿಸುತ್ತಾರೆ. ಮೊದಲ ತುತ್ತು ಬಾಯಲ್ಲಿ ಇಡುತ್ತಲೇ ಅನು, "ಏನೇ ಇದು. ಥು! ಥೂ! ಅಡುಗೆ ಚೆನ್ನಾಗಿಲ್ಲ. ಹೇಗೆ ತಿನ್ನುತ್ತೀಯ ಇದನ್ನು ದಿನಾಗ್ಲು ನೀನು? ನನಗೆ ವಾಂತಿ ಬರೋ ಹಾಗೆ ಆಗುತ್ತಿದೆ"
"ಅಡುಗೆಗೆ ಏನಾಗಿದೆ ಅನು? ತುಂಬಾ ಚೆನ್ನಾಗಿದೆ ಕಣೆ"
"ಇಲ್ಲ ಸಂಧ್ಯಾ. ಇದು ಚೆನ್ನಾಗಿಲ್ಲ"
"ನಮ್ಮನೇಲಿ ಬೇರೆ ಏನು ಇಲ್ಲ ಕಣೆ ನಿನ್ನ ಹಸಿವನ್ನು ನೀಗಿಸೋಕೆ"
"ಸದ್ಯ!! ಏನು ಬೇಡಮ್ಮ ನಿಮ್ಮನೆಯಿಂದ"

ಪ್ರತಿದಿನ ತಂದೆಯ ಅಡುಗೆ ತಿಂದು, ಅವರು ಮಾಡುವ ಅಡುಗೆಯೇ ರುಚಿಯಾದದ್ದು ಅಂತ ನಂಬಿದವಳು ಸಂಧ್ಯಾ.ತಂದೆಯ ಅಡುಗೆ ಚೆನ್ನಾಗಿಲ್ಲ ಎಂಬ ವಿಷಯ ಅವರಿಗೆ ತಿಳಿದರೆ, ಎಲ್ಲಿ ಬೇಜಾರು ಮಾಡ್ಕೋತಾರೋ ಅಂತ ಎಲ್ಲವನ್ನು ಮುಚ್ಚಿಡುತ್ತಾಳೆ. ಪರೀಕ್ಷೆಗಳು ಮುಗಿದ ನಂತರ, ಬೇಸಿಗೆ ರಜೆಗೆಂದು ಅವಳ ಅಜ್ಜಿಯ ಮನೆಗೆ ಹೋಗಲು ಕಾತುರದಿಂದ ಇದ್ದಾಳೆ. ಪರೀಕ್ಷೆಗಳೆಲ್ಲಾ ಮುಗಿದೇ ಹೋದವು. ಅಜ್ಜಿ ಮನೆಗೆ ಸಂಧ್ಯಾಳನ್ನು ಬಿಟ್ಟು ಬರಲು ಅವಳ ತಂದೆ ಬರುತ್ತಾರೆ.
"ಅಮ್ಮ. ಹೇಗಿದ್ದೀಯ?"
"ಬಾರೋ ರಂಗ. ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯ?"
"ಚೆನ್ನಾಗಿದ್ದೀನಿ"
.... ಹೀಗೆ ತಾಯಿ-ಮಗನ ಕ್ಷೇಮ ಸಮಾಚಾರ ನಡೆಯುತ್ತಿರುವ ಮಧ್ಯದಲ್ಲೇ
"ಅಜ್ಜಿ. ಹೇಗಿದ್ದೀಯ?"
"ನಾನು ಚೆನ್ನಾಗಿದ್ದೀನಿ ಸಂಧ್ಯಾ"
"ಅಜ್ಜಿ ನೆನ್ನೆ ತಾನೆ ಪರೀಕ್ಷೆಗಳು ಮುಗಿದವು. ಇವತ್ತೆ ನಿನ್ನ ನೋಡಲು ಬಂದೇ ಬಿಟ್ಟೆ"
ಅಷ್ಟು ಹೊತ್ತಿಗೆ ಸೂರ್ಯ, ಪಶ್ಚಿಮದ ದಿಕ್ಕಿನೆಡೆಗೆ ಪ್ರಯಾಣ ಬೆಳೆಸುತ್ತಿದ್ದ. ಗೋಡೆಗೆ ನೇತುಹಾಕಿದ ಗಡಿಯಾರವನ್ನು ನೋಡಿದ ಅಜ್ಜಿ,
"ಇಬ್ಬರು ಕೈ ಕಾಲು ತೊಳೆದುಕೊಳ್ಳಿ. ಊಟ ಮಾಡುವಿರಂತೆ"
ಊಟದ ಮಧ್ಯೆ... "ರಂಗಾ. ನಿನ್ನ ಮದುವೆ ಬಗ್ಗೆ ಏನು ಯೋಚನೆ ಮಾಡಿದೆ?"
"ಯೋಚನೆ ಮಾಡೋಕೆ ಏನೂ ಇಲ್ಲ. ಇನ್ನು ಸ್ವಲ್ಪ ವರ್ಷದಲ್ಲೇ ಮಗಳ ಮದುವೆ ಮಾಡಬೇಕು. ನನಗೆ ಮದುವೆನಾ?"
ಊಟವಾದ ಬಳಿಕ, ಸಂಧ್ಯಾ ಪಕ್ಕದ ಮನೆ ಹುಡುಗಿ ರಮ್ಯಾಳೊಂದಿಗೆ ಆಡಲು ತೆರಳುತ್ತಾಳೆ.

ಮರು ದಿನ ಬೆಳಿಗ್ಗೆ, "ಅಮ್ಮ ಊರಿಗೆ ಹೊರಡುತ್ತೀನಿ"
"ಸರಿ"
"ಸಂಧ್ಯಾ, ಹೊರಗೆ ಒಬ್ಬಳೇ ಎಲ್ಲೂ ಹೋಗಬೇಡ. ಮನೆ ಒಳಗೋ ಅಥವಾ ಪಕ್ಕದ ಮನೆ ಹುಡುಗಿ ಜೊತೆ ಇಲ್ಲೇ ಆಟಾಡು. ಹುಷಾರು. ಮುಂದಿನ ತಿಂಗಳು ಬರ್ತೀನಿ. ಕರೆದು ಕೊಂಡು ಹೋಗ್ತೀನಿ"
"ಆಯ್ತಪ್ಪ. ಟಾಟಾ ಟಾಟಾ"ಎಂದು, ಇನ್ನೂ ಚಪ್ಪಲಿಯನ್ನೂ ಹಾಕದ ಅಪ್ಪನಿಗೆ ಹೇಳುತ್ತಾಳೆ.
ರಂಗಾ ಹೊರಡುತ್ತಾನೆ. ಸಂಧ್ಯಾ ಏನನ್ನೋ ಯೋಚನೆ ಮಾಡುತ್ತಾ ಕೋಣೆಯ ಮೂಲೆಯಲ್ಲಿ ಕುಳಿತಿರುತ್ತಾಳೆ.
"ಸಂಧ್ಯಾ ಏನು ಮಾಡುತ್ತಾ ಇದೀಯ? ನೋಡು ನಿನ್ನ ಗೆಳತಿ ರಮ್ಯಾ ಬಂದಿದ್ದಾಳೆ. ಇಬ್ಬರು ಹೋಗಿ ಆಡಿಕೊಳ್ಳಿ"
"ಹೇ. ರಮ್ಯಾ. ಹೇಗಿದ್ದೀಯಾ?"
"ನಾನು ಆರಾಮವಾಗಿದ್ದೀನಿ. ಬಾರೆ ಆಡೋಣ"
"ಸರಿ ಕಣೆ"
ಸಂಧ್ಯಾಳಿಗೆ ಆಟದ ಕಡೆ ಗಮನವೇ ಇರಲಿಲ್ಲ. ಗೆಳತಿಯ ಮನಸ್ಸು ನೋಯಿಸಬಾರದು ಎಂದು, ಅರ್ಧ ಗಂಟೆಯ ಬಳಿಕ,"ಇವತ್ತು ಸಾಕು ಕಣೆ. ನಾಳೆ ಆಡೋಣ" ಅಂತ ಹೇಳಿ ಮನೆಗೆ ಬರುತ್ತಾಳೆ.
"ಅಜ್ಜಿ..............." ಅಂತ ಓಡೋಡಿ ಅಜ್ಜಿ ಇದ್ದ ಅಡುಗೆ ಮನೆಗೆ ಬರ್ತಾಳೆ.
"ಏನು ಮಾಡ್ತಾಯಿದ್ದೀಯ"
"ಈಗ ಮಧ್ಯಾಹ್ನಕ್ಕೆ ಅಡುಗೆ ಮಾಡ್ತಾಯಿದ್ದೀನಿ"
"ಅಜ್ಜಿ, ನನಗೂ ಅಡುಗೆ ಮಾಡುವುದು ಹೇಗೆ ಅಂತ ಕಲಿಸು"
"ಓದೋ ವಯಸ್ಸಿನಲ್ಲಿ ಈ ಕಷ್ಟ ಯಾಕೆ ಪುಟ್ಟಿ? ಇನ್ನು ಸ್ವಲ್ಪ ವರ್ಷಗಳಾಗಲಿ ಆಮೇಲೆ ಕಲಿಸುತ್ತೀನಿ"
"ಇಲ್ಲ ಈಗಲೇ ನಾನು ಅಡುಗೆ ಕಲಿಬೇಕು... " ಎಂದು ಹಠ ಮಾಡುತ್ತಾಳೆ.
"ಅಪ್ಪ ಅಡುಗೆ ಹೇಗೆ ಮಾಡ್ತಾನ್ಯೇ ?"
"ನಾನು ಚೆನ್ನಾಗಿ ಮಾಡ್ತಾರೆ ಅಂತ ನಂಬಿದ್ದೆ. ಆದರೆ, ಆ ಅನು ಇದ್ದಾಳಲ್ಲಾ, ಅವಳು ಹೇಳಿದ್ಲು, ವಾಂತಿ ಬರುತ್ತೆ ಕಣೆ ನಿಮಪ್ಪ ಮಾಡಿದ್ದು ತಿಂದರೆ. ಅಪ್ಪನ ಅಡುಗೆ ತಿಂದು ತಿಂದು ನನ್ನ ನಾಲಗೆ ಕೆಟ್ಟು ಹೋಗಿದೆ. ಇನ್ಮೇಲೆ ಶಾಲೆಗೆ ಹೋಗುವ ಮೊದಲು ಅಡುಗೆ ಮಾಡಿಟ್ಟು ಹೋಗ್ತೀನಿ.ಅದಕ್ಕೆ ನಾನು ಈಗಲೇ ಕಲಿಯಬೇಕು"
"ಪುಟ್ಟಿ ಎಲ್ಲಾ ದಿನ ಅಡುಗೆ ಚೆನ್ನಾಗಿ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ಕೆಟ್ಟಿರ ಬಹುದು. ನಾನು ಅಡುಗೆ ಕೆಡಸಿದರೆ, ನಿಮ್ ತಾತ ಇದ್ರಲ್ಲಾ...ರೀಗಾಡಿ ಬಿಡೋರು." ಎಂದು ಹೇಳಿ ತನ್ನ ಗತ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.
ಸಂಧ್ಯಾ ಜೋರಾಗಿ ನಗುವಳು.
ಅಜ್ಜಿ ಎಷ್ಟು ಬಾರಿ ಹೇಳಿದರೂ ಅಕೆಯ ಮಾತನ್ನು ಕೇಳುವ ಸಹನೆ ಸಂಧ್ಯಾಗೆ ಇರಲಿಲ್ಲ. ತುಂಬಾ ಹಠ ಮಾಡುತ್ತಿದ್ದ ಅವಳನ್ನು ಸಮಾಧಾನ ಪಡಿಸಲೇ ಬೇಕಾದ ಸ್ಥಿತಿಯಲ್ಲಿ ರತ್ನಮ್ಮಜ್ಜಿ ಇದ್ದರು.
"ಸರಿ ಕಣೆ ತುಂಟಿ! ನಿನಗೆ ಅಡುಗೆ ಕಲಿಸ್ತೀನಿ. ಒಂದು ಗಾದೆ ಮಾತಿದೆ. ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ, ಗೊತ್ತಾಯ್ತ?"
"ಅಜ್ಜಿ. ಅಮ್ಮ ಮನುಷ್ಯಳು ಅಲ್ವ? ಅವ್ಳು ದೇವರು ಹೇಗೆ ಆಗ್ತಾಳೆ?"
ಅಜ್ಜಿ, ಮನಸ್ಸಲ್ಲೇ ಮಾತಾಡುತ್ತಾಳೆ. "ನಿನಗೊಂದು ಕ್ಷಣ ಕೂಡ ತಾಯಿಯ ಪ್ರೀತಿ ಸಿಕ್ಕಿಲ್ಲ . ಇನ್ನು ಹೇಗೆ ಗೊತ್ತಾಗಬೇಕು ತಾಯಿ ದೇವರಿಗಿಂತ್ಲೂ ಮೇಲು ಅಂತ?"
"ಪುಟ್ಟಿ, ತಾಯಿ ನಮ್ಮನ್ನು ಚಿಕ್ಕ ವಯಸ್ಸಿನಿಂದ ಸಾಕಿರ್ತಾಳೆ. ಪಾಲನೆ, ಪೋಷಣೆ, ವಿದ್ಯಾಭ್ಯಾಸ, ಹೀಗೆ ಹೇಳುತ್ತಾ ಹೋದರೆ, ಕೊನೆಯೇ ಇಲ್ಲ. ಎಲ್ಲಾವುದರ ಜವಾಬ್ದಾರಿ ಹೊತ್ತಿರ್ತಾಳೆ. ದೇವರು ಕೂಡ ನಮ್ಮನ್ನು ಅವಳ ಮಟ್ಟಿಗೆ ನೋಡಿಕೊಳ್ಲೋದಿಲ್ಲ. ಅದಕ್ಕೆ ಹಾಗೆ ನಾಣ್ಣುಡಿ"
ಹೀಗೆ ತಾಯಿಯ ಬಗ್ಗೆ ಕೆಲವು ಮಾತುಗಳನ್ನು ಕೇಳುತ್ತಿದ್ದಂತೆ, ಸಂಧ್ಯಾಳ ಮುಖದಲ್ಲಿ ದುಃಖ ಕಾಣಿಸುತ್ತಿತ್ತು. ಇಲ್ಲಿ ಇರುವಷ್ಟು ದಿನ ಸಂಧ್ಯಾ ತಕ್ಕ ಮಟ್ಟಿಗೆ ಅಡುಗೆ ಕಲಿಯುತ್ತಾಳೆ.ಎಲ್ಲವುದನ್ನು ಒಂದು ಪುಸ್ತಕದಲ್ಲಿ ಅಜ್ಜಿ ಹೇಳಿದಂತೆ ಬರೆದು ಕೊಂಡಳು. "ಅಜ್ಜಿ, ಇದನ್ನು ನಾನು ಮನೆಗೆ ಹೋದ ದಿನವೇ ಮಾಡುತ್ತೇನೆ. ಅಪ್ಪನಿಗೂ ಗೊತ್ತಾಗಲಿ, ನಾನು ಚೆನ್ನಾಗಿ ಅಡುಗೆ ಮಾಡುತ್ತೀನಿ ಅಂತ"

ಹೀಗೆ ತಿಂಗಳು ಕಳೆಯಿತು. ತಂದೆಯ ನಿರೀಕ್ಷೆಯಲ್ಲಿ ಸಂಧ್ಯಾ ಇದ್ದಾಳೆ. ಆಗ ಪಕ್ಕದ ಮನೆ ಶಾಂತಮ್ಮ ಬಂದು,
"ರತ್ನಮ್ಮಾನವರೆ, ನಿಮ್ಗೆ ಫೋನ್ ಬಂದಿದೆ ಬನ್ನಿ"
"ಹೋ!! ಅಜ್ಜಿ, ಅದು ಅಪ್ಪಾನೆ ಮಾಡಿರಬೇಕು. ಇನ್ನು ಸ್ವಲ್ಪ ದಿನ ಇಲ್ಲೇ ಇರಲಿ ಅಂತ ಹೇಳ್ತಾರೆ ಅನ್ನಿಸುತ್ತೆ"
"ಇರು, ಹೋಗಿ ನೋಡಿ ಬರ್ತೀನಿ"
ಫೋನಿನಲ್ಲಿ "ಅಮ್ಮ !!!" ಎಂಬ ಧ್ವನಿ ಕೇಳುತ್ತೆ.
"ಯಾರು? ರಂಗಾ ನೆ..?"
"ಇಲ್ಲ ಅಮ್ಮ. ನಾನು ಅವರ ಪಕ್ಕದ ಮೆನೆ.. ಶ್ರೀನಿವಾಸಪ್ಪ"
"ಏನಪ್ಪ ಸಮಾಚಾರ?"
"ಅಮ್ಮ, ಈ ಕೂಡಲೇ ನೀವು ಸಂಧ್ಯಾಳನ್ನು ಕರೆದು ಕೊಂಡು ಇಲ್ಲಿಗೆ ಬನ್ನಿ"
"ಏನು ವಿಷಯ ಅಂತ ಹೇಳು, ರಂಗಾ ಹುಷಾರಾಗಿದ್ದನೆ ತಾನೆ?"
"ನೀವು ಈ ತಕ್ಷಣ ಹೊರಟು ಬನ್ನಿ ಆಮೇಲೆ ನಾನು ಹೇಳ್ತೀನಿ"
"ಸರಿ ಪಾ"
ಅಜ್ಜಿ ಮನೆಗೆ ಬಂದು, "ಪುಟ್ಟಿ, ಬಾ ನಿಮ್ಮನೆಗೆ ಹೋಗೋಣ"
"ಯಾಕೆ ಅಜ್ಜಿ, ಅಪ್ಪ ಬಾ ಅಂತ ಕರೆದರ?"
"ಹು"
"ನಮ್ಮ ಜೊತೆ ನೀನು ಅಲ್ಲೇ ಇದ್ದು ಬಿಡು. ಚೆನ್ನಾಗಿರುತ್ತೆ"
"ಬಾ ಹೋಗೋಣ"
"ಆಮೇಲೆ ನನಗೆ ಇನ್ನು ಹೆಚ್ಚು ಅಡುಗೆ ಹೇಳಿಕೊಡು"

ಅಜ್ಜಿ ಹಾಗು ಸಂಧ್ಯಾ ಇಬ್ಬರು ರಂಗನ ಮನೆಗೆ ಬರುತ್ತಾರೆ. ಅಲ್ಲಿ ಇದ್ದ ಶ್ರೀನಿವಾಸಪ್ಪ, "ಅಮ್ಮ .. ತುಂಬಾ ದುಃಖವಾಗಿದೆ. ರಂಗಾ ಹೋಗಿಬಿಟ್ಟ್ರು..."
ಅಜ್ಜಿಯ ಕಣ್ಣಲ್ಲಿ ಸಣ್ಣದಾಗಿ ಕಂಬನಿ ಹರಿಯಲು ಪ್ರಾರಂಭಿಸುತ್ತೆ.
"ಅಪ್ಪ ಏನು ಇಷ್ಟು ಹೊತ್ತು ಆದರು ಇನ್ನು ಮಲಗೇ ಇದ್ದೀಯ. ಎದ್ದೇಳಪ್ಪಾ....ಎದ್ದೇಳು."
ಅಳುತಿದ್ದ ಅಜ್ಜಿಯನ್ನು ಗಮನಿಸಿ, ಯಾಕಜ್ಜಿ ಅಳುತ್ತಾಯಿದ್ದೀಯ?
"ಕಣ್ಣಿಗೆ ಕಸ ಬಿತ್ತಮ್ಮಾ..."
"ಅಜ್ಜಿ, ಅಪ್ಪಾ ಹೀಗೆ ಮಲಗಿರೋದು ಒಳ್ಳೇದೇ ಆಯ್ತು ಅಲ್ವಾ? ನಾನು ಈಗ ಅಡುಗೆ ಮಾಡಿ ಅಪ್ಪ ಎದ್ದ ತಕ್ಷಣ ಅವರ ಮುಂದೆ ಇಡುತ್ತೇನೆ. ಜಂಭದಿಂದ ನಾನೆ ಮಾಡಿದೆ ಅಂತ ಹೇಳ್ತೀನಿ." ಇಷ್ಟನ್ನು ಹೇಳಿ, ಅಡುಗೆ ಮನೆಗೆ ಹೋಗಿ ಒಲೆ ಹಚ್ಚಿ, ಅಡುಗೆ ಪ್ರಾರಂಭಿಸೇ ಬಿಡುತ್ತಾಳೆ.

ಸ್ವಲ್ಪ ಹೊತ್ತಿಗೆ ಬೇರೆ ಬೇರೆ ಊರುಗಳಿಂದ ಬರಬೇಕಿದ್ದ ಬಂಧು, ಮಿತ್ರರರೆಲ್ಲಾರೂ ಒಬ್ಬಬ್ಬರಾಗಿ ಬರುತ್ತಿದ್ದರು. ಅರ್ಥ ಅಡುಗೆ ಮುಗಿಸಿದ್ದ ಸಂಧ್ಯಾ ಅವರೆಲ್ಲರನ್ನು ನೋಡಿ, "ಅಜ್ಜಿ, ಇವತ್ತು ನಮ್ಮ ಮನೇಲಿ ಹಬ್ಬ. ಎಲ್ಲರೂ ಬರುತ್ತಾಯಿದ್ದರೆ ನನ್ನ ಕೈ ರುಚಿ ನೋಡೋಕೆ. ಇನ್ನು ಸ್ವಲ್ಪ ಹೊತ್ತು ಅಷ್ಟೆ , ಅಡುಗೆ ಆಗೋಗುತ್ತೆ"

ಏನೂ ಅರಿಯದ ಈ ಕಂದನನ್ನು ನೋಡಿ ಪ್ರತಿಯೊಬ್ಬರು ಕಣ್ಣೀರಿಡುತ್ತಿದ್ದರು. ತುಸು ಸಮಯದ ಬಳಿಕ, ಮಾಡಿದ ಅಡುಗೆಯನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಬಂದು, "ಅಪ್ಪಾ. ಸಾಕು ನಿದ್ದೆ. ಎದ್ದೇಳು. ನಾನೆ ಅಡುಗೆ ಮಾಡಿದ್ದೀನಿ. ಒಂದು ಸಲ ತಿಂದು ಆಮೇಲೆ ಮಲಗು. ಹೇಗಿದೆ ಅಂತ ಹೇಳು. ನೀನು ಮಾಡುತ್ತಿದ್ದ ಅಡುಗೆಗಿಂತ ರುಚಿ ಇದ್ದೇ ಇರುತೆ." ಎಂದು ಪೂರ್ಣವಾದ ಆತ್ಮವಿಶ್ವಾಸದಿಂದ ಹೇಳುತ್ತಾಳೆ.

"ಯಾಕಜ್ಜಿ, ಅಪ್ಪ ಏಳ್ತಾನೆ ಇಲ್ಲ?"
"ಶಾಶ್ವತವಾದ ನಿದ್ದೆಗೆ ಹೋಗಿದ್ದಾನಮ್ಮ ನಿಮ್ಮಪ್ಪ..."

ನಡೆಯಬೇಕಿದ್ದ ಶಾಸ್ತ್ರಗಳೆಲ್ಲ ನಡೆಯುತ್ತೆ. ತಂದೆಯನ್ನು ನಾಲ್ಕು ಜನ ಹೊತ್ತಿಕೊಂಡು ಹೋಗುವುದನ್ನು ನೋಡಿದ ಸಂಧ್ಯಾಳಿಗೆ ಆಗ ಅರಿವಾಗುತ್ತೆ. ತಂದೆ ಇನ್ನಿಲ್ಲಾ ಅಂತ.



(ಎರಡನೇ ಭಾಗ ಇಲ್ಲಿದೆ)

8 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಮೊದಲ ಪ್ರಯತ್ನದಲ್ಲಿಯೇ ತುಂಬಾ ಭರವಸೆಯನ್ನು ಮೂಡಿಸಿದ್ದೀರ. ಚಿಕ್ಕ ಚಿಕ್ಕ ವಾಕ್ಯಗಳಿಂದ ಕತೆ ಚೆನ್ನಾಗಿದೆ ಮೂಡಿದೆ. ಪ್ರಯತ್ನ ಹೀಗೇ ಮುಂದುವರಿಯಲಿ.

Anonymous said...

thumba chanagidhe kathe.. nim bere ella articles/kavithe's full comedy aagiruthe.. so different aagirli antha istondhu aLo kathe bardidhira.. :-)"Womens day" dina ondhu hudgi bagge oodhi thumba kushi aaythu.. heege barithira.. Waiting for another story.. :-)

ಅಂತರ್ವಾಣಿ said...

Radha,

thnx for comments:)

Sudi said...

tumba emotional ... kano... inen alu baro haage ide ee story ..

dinesh said...

ಕಥೆ ಚೆನ್ನಾಗಿದೆ.... ಸೂಪರ್ಬ್

maddy said...

hmmm tragedy!
good attempt jay...

katheyanna innu munduvaresabahudittu...aadagyu swarasya kadime ide... Sandhya appana saavina turning point ginta bere rithi katheya tiruvu needabahudiddu... andare Sandhya tanna jeevana munde nege nibhayisutaale.. ee rithi..

mundina katheyalli mattashtu swarasya serisi bareyiri..

Modala prayatna achchukattagide..

Madhu.

ಅಂತರ್ವಾಣಿ said...

Madhu,

kathe munduvariyutte... yochane maadthaa iddeni...

Lakshmi Shashidhar Chaitanya said...

ಮೊದಲ ಪ್ರಯತ್ನದಲ್ಲೇ ಇಷ್ಟು ಅಮೋಘವಾಗಿ ಬರೆದಿರುವುದು ಶ್ಲಾಘನೀಯ. ಕಥೆ ಚೆನ್ನಾಗಿದೆ. ಹೀಗೆ ಪ್ರಯತ್ನಗಳು ನಡೆಯಲಿ.