Monday, 15 December 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]



ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

Thursday, 11 December 2008

ಸಂವತ್ಸರ ಪೂರೈಸಿದ ಸಂತಸದಲ್ಲಿ...

ಡಿಸೆಂಬರ್ ೧೨ನೇ ಮಾಸ. ಇವತ್ತು ೧೨ ನೇ ದಿನ. ಇದಕ್ಕೆ ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಕಳೆದ ವರ್ಷ ಡಿಸೆಂಬರ್ ೧೨ ರಂದು ಮೊದಲ ಪೋಸ್ಟ್ ಮಾಡಿ ನಾನೂ ಒಬ್ಬ ಕನ್ನಡದ ಬ್ಲಾಗರ್ ಎನಿಸಿಕೊಂಡೆ. ಆದರೆ ಕವನಗಳು ಅದಕ್ಕಿಂತ ಮುಂಚೆಯೇ ಇದ್ದವು. ಬ್ಲಾಗು ಶುರುಮಾಡಿದಾಗ ನನ್ನ ಕಾವ್ಯನಾಮವಾದ "ಅಗ್ರಜ" ಅಂತ ಇಟ್ಟಿದ್ದೆ. ಆಮೇಲೆ ಅದು ಹೋಗಿ ಬೇರೊಂದು ಹೆಸರು ಇಟ್ಟೆ. ಅದೂ ಸಮಾಧಾನ ಸಿಕ್ಕಿರಲಿಲ್ಲ. ಸುಮಾರು ೨೦ ಪೋಸ್ಟ್ ಆದ ಮೇಲೆ, "ಅಂತರ್ವಾಣಿ" ಪದ ಸಿಕ್ಕಿತು. ತುಂಬಾ ಹಿಡಿಸಿತು ಹಾಗು ಸೂಕ್ತ ಅನಿಸಿತು. ಹೀಗೆ ಬರೆಯುತ್ತಾ ಒಂದು ವರ್ಷ ಕಳೆದೇ ಹೋಯಿತು.

ಮೊದಲಿನಿಂದ ನನ್ನ ಬ್ಲಾಗನ್ನು ಓದಿದವರಲ್ಲಿ ಮೊದಲ ಸ್ಥಾನವನ್ನು ಕುಮಾರಿ ಲಕ್ಷ್ಮಿ ಪಡೆದಿರುತ್ತಾರೆ. ಅವರ ನಂತರದಲ್ಲಿ ಕುಮಾರಿ ಪುಷ್ಟ, ಶ್ರೀ ಸುಧೀರ್, ಶ್ರೀ ಶಿವ ಹಂಚಿಕೊಂಡಿರುತ್ತಾರೆ. ಆರ್ಕುಟ್, ಕನ್ನಡಿಗರು.ಕಾಂ ಹಾಗು ಮಜಾ ಮಾಡಿ ತಾಣದಲ್ಲಿ ಸಿಕ್ಕ ಅನೇಕ "ಬೆಮಿ" [ಬೆರಳಂಚಿನ ಮಿತ್ರರು] ಓದಿ ಪ್ರೋತ್ಸಾಹಿಸಿದ್ದಾರೆ. ಇವರಲ್ಲಿ ಶ್ರೀ ತ.ವಿ.ಶ್ರೀ, ಶ್ರೀ ಮಧು, ಶ್ರೀಮತಿ ಲಿಲ್ಲಿ ಇದ್ದಾರೆ. ಈ ಸಮಯದಲ್ಲೇ ಶ್ರೀಮತಿ ತೇಜಸ್ವಿನಿ ಅವರ ಪರಿಚಯವಾಯಿತು. ಅಂದಿನಿಂದ ನನ್ನೆಲ್ಲಾ ಕವನಗಳನ್ನು, ಲೇಖನಗಳನ್ನೂ ಓದಿ ತಪ್ಪುಗಳನ್ನು ತಿದ್ದಿ, ನನಗೆ ಪ್ರೋತ್ಸಾಹಿಸುತ್ತಾಯಿದ್ದಾರೆ. ನಂತರ ನನ್ನೀ ಚಿಕ್ಕ ಬ್ಲಾಗು ಶ್ರೀ ಅರುಣ್, ಶ್ರೀ ಹರೀಶ್ , ಶ್ರೀ ಸುನಾಥಂಕಲ್, ಶ್ರೀ ರಾಜು, ಶ್ರೀ ಶಿವಣ್ಣ, ಶ್ರೀ ಪ್ರಕಾಶಣ್ಣ , ಶ್ರೀ ಸುಧೇಶ್ ಕಣ್ಣಿಗೂ ಬಿದ್ದಿದೆ. ಇವರೆಲ್ಲರ ಸತತ ಪ್ರೋತ್ಸಾಹದಿಂದ ಹೆಚ್ಚು ಬರೆಯ ಬೇಕೆಂಬ ಬಯಕೆ ಮನಕ್ಕಾಗಿದೆ.

ನನಗೆ ಪ್ರೋತ್ಸಾಹ ನೀಡುತ್ತಾ ಬಂದಿರು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.

"ಅಂತರ್ವಾಣಿ" ಪದಕ್ಕೆ ನಾ ಬರೆದ ಕವನ:

"ಹೇಳುವೆನು ನನ್ನೀ ಅಂತರ್ವಾಣಿಯ
ಕೇಳಿದರು ಸರಿ, ಕೇಳದಿದ್ದರೂ ಸರಿ
ಬರೆಯುವೆನು ನನ್ನೀ ಚೇತನವಿರುವವರೆಗೂ
ಓದಿದರು ಸರಿ, ಓದದಿದ್ದರೂ ಸರಿ"

Sunday, 7 December 2008

ಕಲ್ಲಿಗೊಂದು ಕೊಕ್ಕರೆ

ನಮ್ಮ ಮನೆಯ ಎದುರು ಇರುವ ಕೊಳಕು ನೀರಿನಿಂದಾದ ಕೊಳದಲ್ಲಿ ಈ ಮಿತ್ರರು ಸಂಸಾರ ಹೂಡಿದ್ದಾರೆ. (ಹಿಂದೆ ಇದೇ ಕೊಳದಲ್ಲಿ ಕಪ್ಪೆಗಳು ಇದ್ದವು.) ಅವರ ಮಾತುಕತೆ ಅವರಿಂದಲೇ ಕೇಳಿ.


[ ನಾವೆಲ್ಲಾ ಶಂಕ್ರಣ್ಣನ ಮನೆ ಎದುರು ಇದ್ದೀವಿ. ನೀವೆಲ್ಲಾ ನೋಡಲು ಬನ್ನಿ ]



[ಹಾರ ಬೇಡಿ... ಇರಿ ಫೋಟೋ ತೆಗಿತಾನಂತೆ..]

[ನಮ್ಮ ಚಿತ್ರಾನೆ ತೆಗಿ...ಅವರಿಗಿಲ್ಲ ಅದೃಷ್ಟ!]


[ನೀವು ಹಾರಿಬಿಟ್ರಾ? ನಿಮಗೂ ಇಲ್ಲ ಅದೃಷ್ಟ!]

[ನನ್ನ ಫೋಟೋನೆ ತೆಗೆ. ಚೆನ್ನಾಗಿ ಪೋಸ್ ಕೊಡುತ್ತಾಯಿದ್ದೀನಾ...?]

[ಹಾಯ್ ಶಂಕ್ರಣ್ಣ.. ನಾವಿಲ್ಲಿದ್ದೀವಿ... ತೆಗೆ... ದೂರ ಆದರೂ ಪರ್ವಾಗಿಲ್ಲ...ಹಸಿರಿನ ಮಧ್ಯೆ ಬಿಳಿ ಜೀವಿಗಳು ನಾವು...]


[ಅಯ್ಯೋ! ಎಷ್ಟು ಹೇಳಿದರೂ ಕೇಳೋದಿಲ್ವಲ್ಲಾ ನೀವುಗಳು...ಬನ್ನಿ Group ಫೋಟೋ ತೆಗೆಸಿಕೊಳ್ಳೋಣ....]

[ಸಾಲಾಗಿ ಕೂತಿದ್ದೀವಿ.. ಈಗ ತೆಗೆ Group ಫೋಟೋ.]

ವಿ.ಸೂ: ಫೋಟೋಗ್ರಾಫಿ ಒಂದು ಹವ್ಯಾಸವಷ್ಟೇ.

Thursday, 4 December 2008

ಕಾಲಿಗೊಂದು ಕಪ್ಪೆ

"ಬೋಲೋ ವಟ ವಟ ಮಹಾರಾಜ್ ಕೀ ಜಯ್"





ಮಳೆ ಬಂದ ಕಾಲದಿ
ರಸ್ತೆ ಬದಿಯ ಕೊಳದಿ
ಕಪ್ಪೆಗಳ ಸಂಸಾರವೊಂದಿತ್ತು

ಅರೆ ಕ್ಷಣ ಬಿಡದೇ
ಅವುಗಳ "ವಟ ವಟ" ಕರ್ಣಗಳಿಗಿತ್ತು
ಅಲ್ಪ ದಿನಗಳಲ್ಲೇ
ಎಮ್ಮ ಮನೆಯಂಗಳದಲ್ಲಿ
ಕಾಲಿಗೊಂದು ಕಪ್ಪೆ ಸಿಗುತ್ತಿತ್ತು!


"ಭೋಲೋ ವಟ ವಟ ಮಹಾರಾಜ್ ಕೀ ಜಯ್"