[ ಮೊದಲನೆ ಭಾಗ ಇಲ್ಲಿದೆ ]
ನನ್ನೆಲ್ಲಾ ಲಗ್ಗೇಜಿನೊಂದಿಗೆ, ಬಸ್ ನಿಲ್ದಾಣದ ಹತ್ತಿರದಲ್ಲೇ ಇದ್ದ ನಮ್ಮ ಕಚೇರಿಗೆ ಹೋದೆ. ಸಾಮಿ ನನ್ನ ಸ್ವಾಗತಿಸಿದರು. ನನ್ನ ಲಗ್ಗೇಜುಗಳನ್ನು ಸೂಕ್ತ ಸ್ಥಳದಲ್ಲಿಟ್ಟು ಸಾಮಿಯನ್ನೂ ಮಾತಾಡಿಸುತ್ತಿದ್ದೆ. ಅವರೊಂದಿಗೆ ಇತರ ಸಹೋದ್ಯೋಗಿಗಳು ನನ್ನ ವಿಚಾರಿಸಿಕೊಂಡರು. ಮೀಟಿಂಗ್ ಮುಗಿಸಿ ಯಾರ್ಕ್ಕೊ ಬಂದರು. ಅವರ ಜೊತೆ ಕಾಫಿ ಹಾಗು ಸಲ್ಲಾಪವಾದ ಮೇಲೆ ನನ್ನ
ಕೆಲಸಗಳ ಕಡೆ ಗಮನ ಕೊಟ್ಟೆ. ಯಾರ್ಕ್ಕೋ ಅವರು ಹೊಸ ಮ್ಯಾನೇಜರ್ ನ ಪರಿಚಯಿಸಿದರು. ಆಗ ತಿಳಿಯಿತು ನನಗೆ ಯಾರ್ಕ್ಕೋ ರಾಜಿನಾಮೆ ಕೊಟ್ಟಿದ್ದಾರೆ ಎಂದು. ಆ ಹೊಸ ಮ್ಯಾನೇಜರ್ ಹೆಸರು ಯುಕ್ಕಾ.(Jukka).
ಧೂಮಪಾನ ಮುಗಿಸಿ ಬಂದ ಕ್ರಿಸ್ಟಾ "ಜಯ್! ನಿನ್ನ ಅಪಾರ್ಟ್ಮೆಂಟ್ ಸಿದ್ಧವಿದೆ. ಸಂಜೆ ೪ಕ್ಕೆ ಒಬ್ಬ ವ್ಯಕ್ತಿ ಬಂದು ನಿನ್ನ ಕರೆದುಕೊಂಡು ಹೋಗುತ್ತಾನೆ" ಎಂದಳು. ನಾನು ತಾಂಪರೆ ಸೇರಿದ ವಿಷಯವನ್ನು ಅಮ್ಮನಿಗೆ ವಿ-ಅಂಚೆ ಮೂಲಕ ಸಂದೇಶ ಕಳುಹಿಸಿದೆ. ಸ್ವಲ್ಪ ಹೊತ್ತಿನಲ್ಲೆ ಅಮ್ಮನೂ ಸಹ ಚಾಟಿಗಿಳಿದರು. ಸ್ವಲ್ಪ ಹೊತ್ತಿನಲ್ಲೆ ಎಲ್ಲರೂ ಊಟಕ್ಕೆ ಹೊರಟರು. ನನಗೆ ಹಸಿವಿರಲಿಲ್ಲ.ಅಮ್ಮನೊಂದಿಗೆ ಸ್ವಲ್ಪ ಹೊತ್ತು ಚಾಟಿಸಿ, ತಂದಿದ್ದ MTR ತಿನಿಸನ್ನು ಬಿಸಿ ಮಾಡಿ ಊಟ ಮುಗಿಸಿದೆ.
ಕಳೆದ ಬಾರಿ ನಾನು ಇಲ್ಲಿದ್ದಾಗ ಆಡುತ್ತಿದ್ದ Darts ಮತ್ತೆ ಶುರುಮಾಡಿದೆ. ತೆರೋ, ಕಾರಿ, ಕ್ರಿಶ್ಟಾ, ಸಾಮಿ ಕೂಡ ಸೇರಿದರು. ಅಂದು ಶುಕ್ರವಾಗಿದ್ದರಿಂದ ಪ್ರತಿಯೊಬ್ಬರೂ ಬೇಗ ಹೊರಡಲು ಸಿದ್ಧವಾಗಿದ್ದರು. ಕ್ರಿಸ್ಟಾ ಬೇಗನೆ ಹೊರಟಳು. ತೆರೋ ನನ್ನೊಟ್ಟಿಗೆ ಟ್ಯಾಕ್ಸಿಯವರು ಬರುವವರೆಗೂ ಇದ್ದು, ಮಾತಾಡಿಸುತ್ತಿದ್ದರು. ನನ್ನ ಒಂದು Suitcase ಸ್ವತಃ ಅವರೇ ತೆಗೆದು ಕೊಂಡು ಹೊರಗಡೆಗೆ ತಂದರು. ಟ್ಯಾಕ್ಸಿ ಬಂದ ಕೂಡಲೇ ತೆರೋಗೆ ಟಾಟಾ ಮಾಡಿ, ಟ್ಯಾಕ್ಸಿ ಏರಿದೆ.
ಅಪಾರ್ಟ್ಮೆಂಟ್ ಎಷ್ಟು ದೂರ ? ಎಲ್ಲಿದೆ ಹೀಗೆಲ್ಲಾ ಪ್ರಶ್ನೆಗಳೊಂದಿಗೆ ಚಾಲಕನೊಂದಿಗೆ ಮಾತಿಗಿಳಿದೆ. ೪-೫ ನಿಮಿಷ ಆಗುವುದರೊಳಗೆ ಅಪಾರ್ಟ್ಮೆಂಟ್ ಸಿಕ್ಕಿತು. ಅವರು ನನಗೆ ಅಪಾರ್ಟ್ಮೆಂಟಿನ ವ್ಯವಸ್ಥೆಯಲ್ಲ ತೋರಿಸಿ, ಟಿ.ವಿಯನ್ನು ತಂದಿಟ್ಟು, ಇದಕ್ಕೆ connection ಸೋಮವಾರ ಸಿಗುತ್ತೆ ಅಂತ ಹೇಳಿದ.
ಅವನು ಹೊರಟ ಕೂಡಲೆ, Fresh ಆಗಿ ಬಂದು, ಸಿಹಿ ತಿನಿಸುಗಳನ್ನು Fridge ಒಳಗೆ ಇಡದೇ ಮೊದಲು ಕೆಲವನ್ನು ಹೊಟ್ಟೆಯ ಒಳಗೆ ಇಟ್ಟೆ. ಆಮೇಲೆ, ಹಾಗೆ ವಾಯುವಿಹಾರಕ್ಕೆ ಹೊರಗಡೆ ಹೋದೆ. ಹೇಳಿ ಕೇಳಿ ಫಿನ್ ಲ್ಯಾಂಡು ಸರೋವರಗಳ ದೇಶ. ನಮ್ಮ ಅಪಾರ್ಟ್ಮೆಂಟಿನ ಎದುರುಗಡೆಯೇ ಒಂದು ಚಿಕ್ಕ ಸರೋವರವಿತ್ತು. ಅದನ್ನು ವೀಕ್ಷಿಸುತ್ತಿದೆ. ನನಗರಿವಿಲ್ಲದಂತೆಯೇ ನನ್ನ ಕೈಗಳು ಪ್ರಕೃತಿಯ ಸೊಬಗನ್ನು ಸೆರೆ ಹಿಡಿಯುತ್ತಿತ್ತು. ಆ ಪ್ರಕೃತಿಯಲ್ಲಿ ನಾನೂ ಒಬ್ಬನಾಗಿದ್ದರಿಂದ ನನ್ನನ್ನೂ ಸರೆ ಹಿಡಿಯುತ್ತಿತ್ತು. ನಮ್ಮ ಅಪಾರ್ಟ್ಮೆಂಟಿನಿಂದ ೧೦ ಹೆಚ್ಚೆಗಳಿಗೆ ಒಂದು ಬಸ್ ನಿಲ್ದಾಣವಿತ್ತು. ಅಲ್ಲಿ ಆ ಜಾಗದ ಹೆಸರು ಬರೆದಿದ್ದು. ಅದರ ಹೆಸರು "Kuoppamäentie 28". ಈ ಹೆಸರ ಮರೆತು ಹೋಗ ಬಾರದೆಂದು ಚೀಟಿಯಲ್ಲಿ ಬರೆದು ನನ್ನ ವ್ಯಾಲೆಟ್ಟಿನೊಳಗಡೆ ಇಟ್ಟೆ . ಅಕಸ್ಮಾತ್ ದಾರಿ ತಪ್ಪಿದರೂ ಇದು ನನ್ನ ಸಹಾಯಕ್ಕಿರಲಿ ಅಂತ.
ನಂತರ ನನ್ನ ರೂಮಿಗೆ ಬಂದು, ಟೇಬಲ್ ಮೇಲಿದ್ದ ಒಂದು ಪುಟ್ಟ ಪುಸ್ತಕ ಕಂಡೆ. ಕುತೂಹಲದಿಂದ ಯಾವುದಿರ ಬಹುದು ಎಂದು ನೋಡಿದಾಗ ಗೊತ್ತಾಯಿತು, ಅದು ಬಸ್ಸಿನ ವೇಳಾ ಪಟ್ಟಿ ಅಂತ. ನನಗಿಂತ ಹಿಂದೆ ಇದ್ದವರು ಯಾರೋ ಬಿಟ್ಟಿರ ಬಹುದು ಅಥವಾ ಈ ಅಪಾರ್ಟ್ಮೆಂಟಿನವರೇ ಇಟ್ಟಿರಬಹುದು. ಇದರಿಂದ ನನ್ನ ನಿಲ್ದಾಣಕ್ಕೆ ಯಾವ ಬಸ್ ಬರುತ್ತದೆಂದು ಹುಡುಕಿದೆ. ಆ ಬಸ್ಸಿನ ಸಂಖ್ಯೆ ೧೫. ಅಲ್ಲಿಯ ವೇಳಾ ಪಟ್ಟಿಯಲ್ಲಿದ್ದ ಅಂಶವೆಂದರೆ, ಸೋಮವಾರದಿಂದ ಶುಕ್ರವಾರಕ್ಕೆ ಒಂದು ವೇಳಾ ಪಟ್ಟಿ, ಶನಿವಾರಕ್ಕೊಂದು ಹಾಗು ಭಾನುವಾರಕ್ಕೊಂದು! ನನ್ನ ಆಫೀಸಿಗೆ ಹೋಗುವುದಕ್ಕೆ ಯಾವುದು ಸೂಕ್ತ ಅಂತ ನೋಡುತ್ತಿದ್ದೆ. ನನ್ನ ನಿಲ್ದಾಣಕ್ಕೆ ಬಸ್ ಬರುವ ಹೊತ್ತು ಈ ರೀತಿಯಿತ್ತು. ೮:೫೨, ೯:೦೨, ೯:೧೨ ಹೀಗೆ, ೧೦ ನಿಮಿಷಕ್ಕೊಂದರಂತೆ ಬಸ್ ಸಂಚಾರವಿತ್ತು. ಶನಿವಾರದಂದು ೨೦ ನಿಮಿಷಕ್ಕೊಂದು ಬಸ್ ಆದರೆ ಬಾನುವಾರ ೩೦ ನಿಮಿಷಕ್ಕೊಂದು! ಇದನ್ನೆಲ್ಲಾ ಓದುತ್ತಾ ಆಚೆ ನೋಡಿದರೆ ಬಸ್ಸೊಂದು ಬರುತ್ತಿತ್ತು. ಅದೂ ಸರಿಯಾದ ಸಮಯಕ್ಕೆ! ಟಿಕೆಟಿನ ಮೂಲಕ ಹೋಗುವುದಾದರೆ ಒಮ್ಮೆ ಬಸ್ ಹತ್ತಿದರೆ ೨ ಯೂರೋ. ಆ ಟಿಕೆಟಿನ ಅವಧಿ ೧.೩೦ ಗಂಟೆ. ಅಲ್ಲಿ "Bus Pass"ನ ವ್ಯವಸ್ಥೆ ಕೂಡ ಇತ್ತು. ಸರಿ ನಾಳೆಯ ಮೊದಲ ಕೆಲಸ ಈ ಪಾಸ್ ಮಾಡಿಸ ಬೇಕು ಅಂತ ತೀರ್ಮಾನ ಮಾಡಿದೆ. ತಾಂಪರೆಯ ನಕ್ಷೆ ನೋಡುತ್ತಾ, ಯಾವ ಜಾಗ ನೋಡಬಹುದು ಎಂದು ನೋಡುತ್ತಿದ್ದೆ. ಹೊಟ್ಟೆ ಹಸಿವಾಗಿ, MTR ತಿಂದು ಮಲಗಿದೆ.
Sunday, 13 December 2009
ಫಿನ್ ಲ್ಯಾಂಡಿಗೆ ಪ್ರವಾಸ(೩) - ಆಫೀಸು..ಅಲ್ಲಿಂದ ಅಪಾರ್ಟ್ಮೆಂಟ್ಟು
Posted By ಅಂತರ್ವಾಣಿ at 12:25 am 4 ಜನ ಸ್ಪಂದಿಸಿರುವರು
ವಿಭಾಗ: Finland, Tampere, ಪ್ರವಾಸ ಕಥನ
Wednesday, 25 November 2009
ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ಸಿನಿಂದ ತಾಂಪರೆಗೆ
[ ನಾನು ಇದನ್ನು ಬರೆಯೋಕೆ ಈಗ ಶುರು ಮಾಡ್ತಾಯಿದ್ದೀನಿ. ನಾನು ಮೂರನೆ ಬಾರಿ ಪ್ರವಾಸ ಮುಗಿಸಿ ಭಾರತಕ್ಕೆ ಬಂದು ಸುಮಾರು ಎರಡು ವರ್ಷದ ಮೇಲೆ ಒಂದು ತಿಂಗಳು ಕಳೆದು ಹೋಗಿದೆ. ಈಗಲೂ ಬರೆಯದೇ ಇದ್ದರೆ....ವಯಸ್ಸಾಗ್ತಾಯಿದೆ ಮರೆತು ಹೋದರೆ ಅಂತ ಗಾಢವಾದ ಯೋಚನೆಯಲ್ಲಿದ್ದೇನೆ. ಎಲ್ಲಾವುದಕ್ಕೂ ಕಾಲ ಬರಬೇಕು! ]
ಯಾರ್ಕ್ಕೋ ಅವರು "ಶಂಕರಾ.. ನೀನು ಇಲ್ಲಿಗೇ ಬಂದು ಉಳಿದಿರುವ ಕೆಲಸ ಮಾಡು. ನಾವು ಹೀಗೆ ದೂರವಿರುವುದು ಅಷ್ಟು ಸರಿ ಕಾಣಿಸುತ್ತಿಲ್ಲ" ಅಂತ ಹೇಳಿದರು. ಅದಕ್ಕೆ ನಾನು "ತಥಾಸ್ತು" ಅಂದೆ. ಯಾರ್ಕ್ಕೋ ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ, ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳ ಬೇಕಾಗುತ್ತೆ. ಹಾಗಾಗಿ ಅಪಾರ್ಟ್ಮೆಂಟ್ ಬೇಕೇ ಬೇಕು ಅಂತ. ಅವರು ಯಾವ ತಕರಾರಿಲ್ಲದೆ ಒಪ್ಪಿದರು.
ಆ ದಿನ ಸೆಪ್ಟೆಂಬರ್ ೬. ಚೆನ್ನಾಗಿ ನೆನಪಿದೆ. ನನ್ನ ಅಕ್ಕಳ ಹುಟ್ಟು ಹಬ್ಬ. ಅವಳಿಗೆ ನಾನು ಶುಭಕೋರಿದರೆ ಆಕೆ ನನಗೆ ಶುಭ ಪ್ರಯಾಣ ಕೋರಿದಳು. ನನ್ನ ತಾಂಪರೆಯ ಅಪಾರ್ಟ್ಮೆಂಟ್ ಸಿದ್ಧವಿರುವ ಬಗ್ಗೆ ಯಾವುದೇ ವಿ-ಅಂಚೆಗಳು ಇರಲಿಲ್ಲ. ಅಲ್ಲಿಗೆ ತಲುಪುವ ಹೊತ್ತಿಗೆ ಸೂಕ್ತವಾದ ವ್ಯವಸ್ಥೆ ಮಾಡಿರುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಅಪ್ಪ ಟ್ಯಾಕ್ಸಿಯ ವ್ಯವಸ್ಥೆ ಮಾಡಿದ್ದರು. ನಾನು ಕಳೆದೆರಡು ಬಾರಿ ಪ್ರಯಾಣಿಸಿದಾಗ ಯಾವ "ರಾಯಭಾರಿ" ಕಾರು ಬಂದಿತ್ತೋ.. ಅದೇ ಕಾರು. ಅದೇ ಚಾಲಕ. ಅಂಗಡಿಯ ಮಾಲಿಕ ನನ್ನ ಹೆಸರು ಹೇಳಿ, ಫೋನ್ ನಂಬರ್ ಕೊಡೋಕೆ ಹೋದಾಗ.. ಆ ಚಾಲಕ "ಇವರ ಮನೆ ಗೊತ್ತು ಬಿಡಿ. ಹೋಗುತ್ತೀನಿ" ಅಂದರಂತೆ.
ಯಥಾ ಪ್ರಕಾರ ಮನೆಯಲ್ಲಿ ಅಮೃತದಂತಹ ತಿನಿಸುಗಳು, ಸಾಂಬಾರ್ ಪುಡಿ, ಉಪ್ಪಿಟ್ ಮಿಕ್ಸ್, ಅವಲಕ್ಕಿ, ಸ್ವಲ್ಪ ಅಕ್ಕಿ, ಬೇಳೆ , ಮಾವಿನ ಕಾಯಿ ತೊಕ್ಕು..(ಈಗಲೂ ಬಾಯಲ್ಲಿ ನೀರು ಬರುತ್ತಿದೆ...ಅಷ್ಟು ಸೊಗಸಾಗಿತ್ತು) ಇತ್ಯಾದಿ ಪದಾರ್ಥಗಳನ್ನು ಹಾಗು ಇವುಗಳೊಂದಿಗೆ MTR ತಿನಿಸುಗಳನ್ನು ಪ್ಯಾಕ್ ಮಾಡಿಕೊಂಡು ಹೆಲ್ಸಿಂಕಿಗೆ ಹಾರಿ, ತಲುಪಿದಾಗ ಸಮಯ ೭ರ ಬೆಳಿಗ್ಗೆ ೭.೩೦ ಇರಬೇಕು.
ನನ್ನ ಲಗ್ಗೇಜು ತೆಗೆದುಕೊಂಡು ಅಮ್ಮನಿಗೆ ಫೋನ್ ಮಾಡಲು ಹೊರಟೆ. ನನ್ನ ಬಳಿ ನಾಣ್ಯಗಳು ಇರಲಿಲ್ಲ. ಅಲ್ಲೇ ಒಂದು ಅಂಗಡಿಯಲ್ಲಿ ೫೦ ಯೂರೋಗಳ ನೋಟ್ ಕೊಟ್ಟು ಚಿಲ್ಲರೆ ಕೊಡಮ್ಮ ಅಂತ ಕೇಳಿದೆ. ಆಕೆ ಬಾಯಿ ಬಿಡುತ್ತಿದ್ದಳು. "ಇಷ್ಟು ದೊಡ್ಡ ಮೊತ್ತದ ಚಿಲ್ಲರೆ ನನ್ನಲ್ಲಿಲ್ಲ" ಅಂತ! ಹೆಚ್ಚಿರಲಿಲ್ಲ ನಮ್ಮ ಲೆಕ್ಕದಲ್ಲಿ ೩ ಸಾವಿರ! ಆಮೇಲೆ ಆಕೆಯೇ ಎದುರುಗಡೆ ನೋಡಿ, ಬ್ಯಾಂಕಿದೆ. ಅಲ್ಲಿ ವಿಚಾರಿಸಿ ಸಿಗಬಹುದು ಎಂದಳು. ಕೂಡಲೆ ಅವಳಿಗೆ ಧನ್ಯವಾದಗಳನ್ನರ್ಪಿಸಿ ಹೊರಟೆ. ಬ್ಯಾಂಕಿನವಳಿಗೆ ಸರಿಯಾಗಿ ಇಂಗ್ಲಿಶ್ ಬರುತ್ತಿರಲಿಲ್ಲ. ಆಮೇಲೆ ನನ್ನ ಬಳಿ ಇದ್ದ ದುಡ್ಡು ನೋಡಿ, ಅರ್ಥ ಮಾಡಿಕೊಂಡು ಚಿಲ್ಲರೆ ಕೊಟ್ಟಳು. ಫೋನ್ ಕಾರ್ಯಗಳು ಆದ ಮೇಲೆ, ನನ್ನ ಮುಖ್ಯ ಕಾರ್ಯಗಳನ್ನು ಮುಗಿಸಿ ಬಂದಾಗ ಸುಮಾರು ೮.೧೦ ಇರಬೇಕು.
ಯಾರ್ಕ್ಕೋ ಅವರು ಮುಂಚೆಯೇ ಹೇಳಿದ್ದರು, ತಾಂಪರೆಗೆ ಬಸ್ಸು ಹೆಲ್ಸಿಂಕಿಯ ವಿಮಾನ ನಿಲ್ದಾಣದಲ್ಲೇ ಸಿಗುತ್ತದೆ. ಅದರಿಂದ ಬಾ ಎಂದು. ಕಳೆದ ಬಾರಿ ಇಲ್ಲಿ ಬಂದು ಸಮಯ ವ್ಯರ್ಥಮಾಡಿದ್ದು ನೆನೆಪಾಯ್ತು. ಹಾಗಾಗಿ ಬಸ್ಸು ಎಷ್ಟು ಹೊತ್ತಿಗೆ ಇದೆಯೆಂದು ತಿಳಿದು ಕೊಂಡೆ. ಅದು ೮.೧೫ ಇತ್ತು. ಅದು ನಿಲ್ಲುವ ಜಾಗಕ್ಕೆ ತಲುಪುವ ಹೊತ್ತಿಗೆ ಬಸ್ಸು ಹೊರಟು ಬಿಟ್ಟಿತ್ತು.
ಒಂದು ಗಂಟೆಯ ನಂತರ ತಾಂಪರೆಗೆ ಹೋಗುವ ಮತ್ತೊಂದು ಬಸ್ಸು ಬಂತು. ಆ ಚಾಲಕ ನನ್ನ ತಾಂಪರೆಗಾ? ಅಂತ ಕೇಳಿದ. ಹೌದು ಎನ್ನಲು, ನನ್ನ ಲಗ್ಗೇಜನ್ನು ಆತನೇ ಬಸ್ಸಿನಲ್ಲಿ ಇರಿಸಿದ. ಆಮೇಲೆ ಈ ಬಸ್ಸು ಸ್ವಲ್ಪ ದೂರಕ್ಕೆ ಹೋಗುತ್ತದೆ. ಅಲ್ಲಿಂದ ನಿಮಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ ಅಂತ ಹೇಳಿದ. ನಾನು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆ. ೧೫ ನಿಮಿಷದೊಳಗೆ ನನ್ನನ್ನು ಬೇರೆ ಬಸ್ಸಿನಲ್ಲಿ ಹತ್ತಿಸಿ ಕಳುಹಿಸಿದನು. ತಾಂಪರೆಯ ಪರಿಸರವನ್ನು ನೋಡುತ್ತಿದ್ದಂತೆಯೇ ಯಾವಾಗ ನಿದ್ದೆಗೆ ಜಾರಿದೆನೋ ನನಗರಿವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಯಾರೋ ಮೈಕಿನಲ್ಲಿ ಮಾತಾಡಿದ ಹಾಗೆ ಕೇಳಿಸಿತು. ಎಚ್ಚರವಾಗಿ ನೋಡಿದರೆ ಸಮಯ ೧೧.೨೫. ಹೋ! ತಾಂಪರೆ ಬಂದಿರಬಹುದು ಎನಿಸಿತು. ತಾಂಪರೆಯು ಸುಮಾರು ೧೭೫ ಕಿ.ಮಿ ಇತ್ತು. ೯.೧೫ ಹೊರಟಿದ ಬಸ್ಸು ೧೧.೩೦ಕ್ಕೆ ಬಂದು ತಾಂಪರೆನ್ನು ಸೇರಿತು. ಒಂದು ಕಡಯೂ ೧೦ ನಿಮಿಷ ವಿರಾಮಕ್ಕೆ ನಿಲ್ಲಿಸಲೇ ಇಲ್ಲ. ನಿಲ್ಲಿಸ ಬೇಕಾಗೂ ಇರಲಿಲ್ಲ. ಕಾರಣ ಬಸ್ಸಿನೊಳಗೇ ಆ ವ್ಯವಸ್ಥೆ ಇತ್ತು!
Posted By ಅಂತರ್ವಾಣಿ at 10:02 pm 4 ಜನ ಸ್ಪಂದಿಸಿರುವರು
ವಿಭಾಗ: Finland, Tampere, ಪ್ರವಾಸ ಕಥನ
Saturday, 14 November 2009
ನಾನೂ ಮಕ್ಕಳ ದಿನಾಚರಣೆ ಆಚರಿಸಿದೆ
ಈ ದಿನ ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಾರೆ. ಈ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಬಹುಶಃ ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವನ್ನು ಹೀಗೆ ಆಚಾರಿಸುತ್ತಿರುವುದು ಕೇವಲ ಭಾರತ ಅಂತ ನನ್ನ ಅಭಿಪ್ರಾಯ. ಈಗ ನೇರವಾಗಿ ವಿಷಯಕ್ಕೆ ಬರುತ್ತೇನೆ.
ಮಕ್ಕಳ ದಿನಾಚರಣೆಗೆ ನಾನು ಮಗುವಾಗಿ ಬಿಡುತ್ತೇನೆ. ನಾನು ಹೇಗೆ ಆಚರಿಸುತ್ತೇನೆಂದರೆ... ಅಮ್ಮನಿಗೆ ಹೇಳುತ್ತೀನಿ.. "ಇವತ್ತು ಮಕ್ಕಳ ದಿನಾಚರಣೆ. ಹಾಗಾಗಿ, ಊಟ, ತಿಂಡಿಯನ್ನು ನೀನೆ ತಿನ್ನಿಸ ಬೇಕು. ಹಾಲು, ಕಾಫಿ ನೀನೇ ಕುಡಿಸ ಬೇಕು." ಈ ರೀತಿಯಾದ ಆಚರಣೆ ನಡೆಯುತ್ತಾ ಬಂದಿದೆ, ಮುಂದೂ ನಡೆಯುತ್ತೆ. ಯಾಕೆಂದರೆ ಅವರಿಗೆ ನಾನಿನ್ನೂ ಮಗು! ಮತ್ತೊಂದು ಸ್ವಾರಸ್ಯಕರ ವಿಷಯವೇನೆಂದರೆ ಈ ತಾಯಿನಿಂದ ತಿನ್ನಿಸಿಕೊಳ್ಳುವ ಸೌಭಾಗ್ಯಕ್ಕೆ ನಾನು ನವೆಂಬರ್ ೧೪ಕ್ಕೇ ಕಾಯಬೇಕಿಲ್ಲ. ನನಗೆ ಯಾವಾಗ ಬೇಕೋ ಆವಾಗ ಮಕ್ಕಳ ದಿನಾಚರಣೆ ಆಚರಿಸುತ್ತೇನೆ. ನನಗೆ ಕಾಲು ಶತಮಾನವಾದರೂ ಈಗಲೂ ತಿನ್ನಿಸುತ್ತಾರೆ.
ಆದರೆ ಈ ಸಲ ವಿಶೇಷವಾಗಿತ್ತು ಈ ಆಚರಣೆ. ಅದು ಹೇಗೆಂದರೆ... ನಮ್ಮ ಮನೆಯ ಹಿಂದೆ, ಕೆಲವು ಗುಡಿಸಲುಗಳಿವೆ. ಅಲ್ಲಿಯ ಮಕ್ಕಳ ಪ್ರತಿದಿನ ನಮ್ಮ ಮನೆಯ ಮುಂದೆ ಬಂದು ಆಡುತ್ತಾ ಇರುತ್ತಾರೆ. ಈ ೭-೮ ಮಕ್ಕಳ ಗುಂಪಿಗೆ ಒಬ್ಬ ನಾಯಕನಿದ್ದಾನೆ. ಅವನ ಮಾತು ಅಂದ್ರೆ ಎಲ್ಲಾರೂ ಕೇಳುತ್ತಾರೆ. ಅವನನ್ನು ನಾನು ಹೀರೋ ಅಂತ ಕರಿಯುತ್ತೇನೆ.
ಮೊನ್ನೆ ಅವರೆಲ್ಲಾ ಬಂದುರು. ಆ ನಾಯಕ, ನನ್ನ ಕೇಳಿದ. "ಅಂಕಲ್... ಪೇಡಾ ಇದೆಯಾ?".. "ಇಲ್ಲ ಕಣೋ" ಅಂದೆ. ಸುಮ್ಮನೆ ಹೋಗುತ್ತಾನೆ ಅಂತ ತಿಳಿದಿದ್ದೆ.. ಆದರೆ ಹೋಗಲಿಲ್ಲ. ಮತ್ತೇ "ಅಂಕಲ್... ಚಾಕೇಟ್ ಇದೆಯಾ?" "ಇಲ್ಲ ಕಣೋ..." ಅವನಿಗೆ ನಿರಾಶೆ ಯಾಗಿತ್ತು ಅನಿಸುತ್ತೆ... ಅದಕ್ಕೆ. " ಹೋಗಲಿ...ಕಲ್ಸಕ್ಕರೇ ಆದರೋ ಇದೆಯಾ???"...ಅವನು ಕೇಳಿದ ರೀತಿ ನನ್ನ ಮನಕ್ಕೆ ತಟ್ಟಿತು. "ಇಲ್ಲ ಕಣೋ.. ನಾಳೆ ಬಾ ಚಾಕ್ಲೇಟು ಕೊಡ್ತೀನಿ" ಅಂದೆ. ಎಲ್ಲಾರೂ ಆಡುತ್ತಿದ್ದರು ರಸ್ತೆಯೇ ಬ್ಲಾಕಾಗಿತ್ತು. ಅದಕ್ಕೆ ಆ ಹೀರೋ.."ಲೋ.. ಅಂಕಲ್ ಸಿಟಿ ಕಡೆಗೆ ಹೋಗ್ತಾರೆ..ಜಾಗ ಬಿಡ್ರೋ..." ಅಂತ ಹೇಳಿ... ಎಲ್ಲರೂ ನನ್ನ ಹಿಂಬಾಲಿಸಿ, "ಟಾಟಾ ಅಂಕಲ್... ಟಾಟಾ ಅಂಕಲ್" ಅಂತ ಸುಮಾರು ೧೦೦ ಮೀಟರು ನನ್ನ ಹಿಂದೆ ಬಂದು... ಒಬ್ಬೊಬ್ಬರು ಕಡೇ ಪಕ್ಷ...೧೫-೨೦ ಬಾರಿ ಟಾಟಾ ಮಾಡಿದರು. ಈ ಸಂತಸ ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತೆ. ಅದಲ್ಲದೆ.. ಮಕ್ಕಳೆಂದರೆ ನನಗೆ ಪ್ರಾಣ. ಆರ್ಕಟ್ಟಿನಲ್ಲೂ ಅಷ್ಟೇ..ನನ್ನ ಫೋಟೋಗಳಿಗಿಂತ ಹೆಚ್ಚು.. ನನ್ನ ಅಕ್ಕನ ಮಕ್ಕಳ ಫೋಟೋ..ವಿಡಿಯೋ ಇವೆ.
ನಾನು ಒಂದಷ್ಟು ಚಾಕ್ಲೇಟ್ ತಂದಿಟ್ಟು.. ಕಾಯುತ್ತಿದ್ದೆ. ಈ ಸಂಜೆ..ಅವರಲ್ಲಿ ಆ ಹೀರೋನ ಕರೆದೆ. ಅವನೊಬ್ಬನೆ ಬರಲಿಲ್ಲ.. ಇಡೇ ಸೈನ್ಯದೊಂದಿಗೆ ಓಡೋಡಿ ಬಂದ. ಅವನ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಅವನಿಗೆ ಅರಿವಿತ್ತು.. ಈ ಅಂಕಲ್ ಚಾಕೇಟ್ ಕೊಡ್ತಾರೆ ಅಂತ..ಎಲ್ಲರೂ ಬಂದು ಸೇರಿದ ಮೇಲೆ, ನೋಡೋ..ಚಾಕ್ಲೇಟ್ ತಂದಿದ್ದೀನಿ ನಿಮಗೆಲ್ಲ.. ಅಂತ ಹೇಳಿದೆ. ಎಲ್ಲರ ಮುಖದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗುತ್ತಿತ್ತು. ಎಲ್ಲ ಚಾಕಲೇಟನ್ನು ಹಂಚಿದೆ. ಕಡೆಯಲ್ಲಿ ನನಗೊಂದು ಅಂತ ಇಟ್ಟುಕೊಂಡಿದ್ದೆ. ( ನಾನೂ ಮಗು ಅಲ್ವಾ?) ಯಾಕೋ ಅದನ್ನೂ ಆ ಹೀರೋಗೆ ಕೊಟ್ಟೆ. ಎಲ್ಲರ ಮುಖದಲ್ಲಿ ತುಂಬು ನಗು ಇತ್ತು. ಎಲ್ಲರೂ ಚಾಕೇಟ್ ಹಿಡಿದು.. ಅವರ ಗುಡುಸಲು ಕಡೆ ಓಡಿದರು..
[ ಯಾವುದೇ ಹಬ್ಬವಾಗಲಿ ಅಥವಾ ಈ ರೀತಿಯಾದ ದಿನಾಚರಣೆಗೆ ನಾನು ಪೋಸ್ಟ್ ಮಾಡಲ್ಲ. ಕಾರಣವಿಷ್ಟೆ.. ಅನೇಕ ಬ್ಲಾಗಿಗರು ಅದೇ ವಿಷಯ ಬರೆದಿರುತ್ತಾರೆ. ಆದರೆ ಇಂದಿನ ಘಟನೆ ಮನಸ್ಸಿಗೆ ನಾಟಿದೆ. ಹಾಗಾಗಿ ಈ ಲೇಖನ ಬರೆದೆ. ಮುಂದೆ ಈ ರೀತಿ ಆಚರಣೆ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಬ್ಲಾಗಿನಲ್ಲಿದ್ದರೆ... ಇದನ್ನು ಮತ್ತೆ ಓದಿ... ನೆನೆಯ ಬಹುದು.]
ಮತ್ತೊಮ್ಮೆ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಿಮಗೆ ಮಕ್ಕಳಿರ ಬಹುದು ಅಥವಾ ಮೊಮ್ಮಕ್ಕಳಿರ ಬಹುದು ಆದರೆ ನಿಮ್ಮ ಹೆತ್ತವರಿಗೆ ನೀವಿನ್ನೂ ಮಕ್ಕಳ. :)
Posted By ಅಂತರ್ವಾಣಿ at 11:26 pm 3 ಜನ ಸ್ಪಂದಿಸಿರುವರು
Thursday, 29 October 2009
ಸವಿತ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಕಾರ್ಮೋಡಗಳ ಹೊದಿಕೆಯ ಪಕ್ಕಕೆ ಸರಿಸುತ
ಕೋಗಿಲೆಗಳ ಕಂಠದಿ ಸುಪ್ರಭಾತವ ಹಾಡಿಸುತ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಎಲೆಗಳ ಮೇಲಿನ ಹನಿಗಳ ಕಣ್ಣಿಗೆ ಎರಚುತ
ಅರಳಿದ ಹೂಗಳು ಕಂಪನು ಬೀರುತ
ಹಾರುವ ಹಕ್ಕಿಯ ಸಾಲಿನ ಮೆರವಣಿಗೆಯಿಂದ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಆಗಸದಿ ತುಂಬಿಹ ಇಬ್ಬನಿ ಹಾಸು
ಇರುಳೆಂಬ ಭ್ರಮೆಯ ನೀಡುತಿದೆ!
ಗಂಟೆ ಏಳಾದರೂ ನೀ ಏಳ ಬಾರದೆ?
ಇರುಳನ್ನು ನೂಕಿ, ಬೆಳಕ ನೀಡ ಬಾರದೆ?
[ನಮಗಿಂತ ಬೇಗ ಏಳ ಬೇಕಾದ ಸೂರ್ಯ, ಆಲಸ್ಯದಿಂದ ಮಲಗಿದರೆ, ಈ ರೀತಿ ಪ್ರಾರ್ಥನೆ ಮಾಡ ಬಹುದಲ್ವಾ? ]
Tuesday, 13 October 2009
ದುಡ್ಡಿನ ಗಿಡ
ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು
ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ
ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?
ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?
ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.
ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.
Posted By ಅಂತರ್ವಾಣಿ at 8:58 pm 9 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು, ವಿಶೇಷ ಕವನಗಳು
Friday, 2 October 2009
ನಿನಗಾಗಿ...
ನಿನ್ನ ಮರೆತಿಹ ಚಣಗಳೆಲ್ಲಿದೆ
ನಿನ್ನ ನೆನೆಯದ ದಿನಗಳೆಲ್ಲಿದೆ
ನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲ
ನನ್ನ ಮೊಗದಲಿ ನಗುವ ತರಿಸುವೆ
ನನ್ನ ನಯನದಿ ಬಿಂದು ಸುರಿಸುವೆ
ನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ
[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]
Posted By ಅಂತರ್ವಾಣಿ at 5:16 pm 10 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Friday, 14 August 2009
ಯಾರೆ ನೀನು ಚೆಲುವೆ...?
ನೆನೆಯುವೆ ಮಳೆಯಲಿ
ನಿನ್ನ ಜೊತೆಯಲಿ
ಅಂತರಂಗದ ಮಾತುಗಳ
ಮೌನ ಸಂಭಾಷಣೆಯಲಿ!
ಮಳೆಯಿಂದ ನೀ ನೆನೆದು
ಮೈದುಂಬಿ ಬರುವಾಗ
ತೆರೆದ ಕಂಗಳಲಿ ನಿಂದೆ
ನಿನ್ನ ಪಾದದಡಿಯಲಿ
ಮಂಜಿನೂರಿನಲ್ಲಿ ಜನನ
ಕೊರೆಯುವಂತ ದೇಹ ರಚನ!
ಮತ್ತೆ ನೋಡ ಬಯಸುವೆ
ಸೌಂದರ್ಯವತಿ ನಿನ್ನ!
--
ಈ ಸೌಂದರ್ಯವತಿ ಯಾರು ಅಂತ ನಿಮಗೆ ಗೊತ್ತಿದ್ದಲ್ಲಿ ತಿಳಿಸಿ. ಸರಿಯಾದ ಉತ್ತರಕ್ಕೆ ಬಹುಮಾನ ಖಚಿತ! ಒಂದು ಸುಳಿವು ಕೊಡುತ್ತೀನಿ. ಕೊನೆ ಚರಣದ ಮೊದಲೆರಡು ಸಾಲುಗಳನ್ನು ಹಲವು ಬಾರಿ ಓದಿದರೆ ಏನಾದರೂ ಹೊಳಿಯಬಹುದು.
Posted By ಅಂತರ್ವಾಣಿ at 11:52 pm 31 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Wednesday, 22 July 2009
ಗುಬ್ಬಿ ಮರಿ ಕಂಡೆನಮ್ಮ
ಅಂದು ಈ ರೀತಿ ಕೇಳಿದ್ದೆ,
"ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ....
ಪೂರ್ತಿ ಕವನ ಇಲ್ಲಿದೆ.
ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.
ಗುಬ್ಬಿ ಮರಿ ಕಂಡೆನಮ್ಮ
ಕಣ್ಣಿಗಿಂದು ಹಬ್ಬವಮ್ಮ
ನನ್ನ ನೋಡ ಬೇಕೆಂದು
ಮತ್ತೆ ಹಾರಿ ಬಂತೇನಮ್ಮ?
ನನ್ನ ಊಟ ಸುಲಭವಮ್ಮ
ನಿನ್ನ ಓಟ ನಿಲ್ಲಿಸಮ್ಮ
ಮನೆಯ ಅಂಗಳದಿ ಬಂದ
ಗುಬ್ಬಿ ಮರಿ ತೋರಿಸಮ್ಮ
ಆಟಿಕೆ ಗುಬ್ಬಿ ಏಕಮ್ಮ?
ಹಾರುವ ಗುಬ್ಬಿ ಇದೆಯಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂತಿಹ ಗುಬ್ಬಿ ತೋರಿಸಮ್ಮ
Posted By ಅಂತರ್ವಾಣಿ at 11:07 pm 7 ಜನ ಸ್ಪಂದಿಸಿರುವರು
Saturday, 11 July 2009
ಯಾವ ಚೆಲುವ ಬರುತ್ತಾನೋ..?
ಯಾವ ಚೆಲುವ ಬರುತ್ತಾನೋ
ಈ ಚೆಲುವೆಯ ನೋಡಲು?
ಯಾವ ಸುರನು ಬರುತ್ತಾನೋ
ಈ ದೇವತೆಯ ಪಡೆಯಲು?
ಎಲ್ಲೂ ಕಾಣದ ಮೂಗುತಿ ಸುಂದರಿ
ಇಲ್ಲೇ ಇಹಳು ಮೇನಕೆ ಸೋದರಿ!
ಕಣ್ಣ ಸನ್ನೆಯಲೆ ಮಾತು ಬೆಳೆಯಿತು
ತುಟಿಯು ಅದರುತ ಮುತ್ತ ಬಯಸಿತು!
ನಿನ್ನ ದನಿಯ ಕೇಳಲು
ಚಡಪಡಿಸಿತು ಅವನ ಕಿವಿ
ನಿನ್ನ ಕುರಿತು ಗೀಚುತ
ಅವನಾದನು ಕವಿ!
Posted By ಅಂತರ್ವಾಣಿ at 12:50 am 10 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Friday, 26 June 2009
ಅಗ್ರಜಾನುಭವ - ೩
ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ
Posted By ಅಂತರ್ವಾಣಿ at 11:02 pm 6 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು
Friday, 5 June 2009
ಹೂವಿನಂತೆ ಬಾಳು
--
ಹೂವಿನಂತೆ ಬಾಳು
ಬಾಡಿದ ಹೂ ಕಸದ ಪಾಲು
ಬಾಡದ ಹೂ ದೇವರ ಪಾಲು
ಚೆಲುವಿರಲಿ ನೋಟಕೆ
ಪರಿಮಳವಿರಲಿ ಆಕರ್ಷಣೆಗೆ
ಮುಳ್ಳಿರಲಿ ನಿನ್ನ ರಕ್ಷಣೆಗೆ
ಮಕರಂದವಿರಲಿ ಸದುದ್ದೇಶಕೆ
ಮುಡಿಯಲು ಬೇಕು ಹೂ
ಮಡಿದಾಗಲೂ ಬೇಕು ಹೂ
ಎಲ್ಲರ ಪಾಲಿಗು ಹೂವಾಗು
ಎಲ್ಲರ ಪಾಲಿಗು ಬೇಕಾಗು
Posted By ಅಂತರ್ವಾಣಿ at 8:00 am 11 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Friday, 29 May 2009
ಪೆದ್ದ ನಾನು..
ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನು
ಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನು
ಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನು
ಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು
ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನು
ಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನು
ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು
ಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನು
Posted By ಅಂತರ್ವಾಣಿ at 10:52 pm 9 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Friday, 22 May 2009
ನಾ ಕಂಡ ವಿಮಾನ ದುರಂತ
ನಮ್ಮ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸ್ವಲ್ಪ ಮಟ್ಟಿಗೆ ಹತ್ತಿರವೆನ್ನ ಬಹುದು. ಅದೂ ಅಲ್ಲದೆ ಜಕ್ಕೂರಿನಲ್ಲಿ ತರಬೇತಿ ನಡೆಸುವ ಪೈಲಟ್ ಗಳು, ವಿಮಾನವನ್ನು ನಮ್ಮ ಮನೆ ಮೇಲೆ ಹಾರಾಟ ನಡೆಸುತ್ತಾಯಿರುತ್ತಾರೆ.
ಹೀಗಿರುವಾಗ ಒಂದು ದಿನ ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವಿದೇಶಕ್ಕೆ ಹಾರ ಬೇಕಿದ್ದ ವಿಮಾನವು ನಾನು ನೋಡುತ್ತಿದ್ದಂತೆಯೇ..ದುರಂತಕ್ಕೀಡಾಯಿತು. ಕ್ಷಣ ಕಾಲ ಏನೂ ತೋಚದಂತಾಯಿತು. ವಿಮಾನಕ್ಕೆ ಬೆಂಕಿ ತಗುಲಿದ್ದರಿಂದ ಸುತ್ತ ಮುತ್ತಲಿನ ಮನೆಗಳಿಗೆ ಹಾನಿ ಮಾಡ ಬಹುದೆಂದು ತಿಳಿದು ಕೂಡಲೆ ನಮ್ಮ ಮನೆಯಿಂದ ದೊಡ್ಡ ಪೈಪು ತಂದು, ಟ್ಯಾಂಕಿನ ಸಹಾಯದಿಂದ ವಿಮಾನದ ಬೆಂಕಿಯನ್ನು ಆರಿಸ ತೊಡಗಿದೆ. ಅಷ್ಟು ಹೊತ್ತಿಗೆ ನಮ್ಮ ಬಡಾವಣೆಯ ಜನರು ಅಲ್ಲಿ ಸೇರಿದ್ದರು. ಎಂದೂ ಯಾರ ಮೇಲೂ ರೀಗಾಡದ ನಾನು ಅಂದು ಏನಾಯಿತೋ ಗೊತ್ತಿಲ್ಲ. ಎಲ್ಲರ ಮೇಲು ರೇಗಾಡಿಬಿಟ್ಟೆ. "ಇಲ್ಲೇನ್ರಿ ನೋಡುತ್ತಿದ್ದೀರ. ನಿಮ್ಮ ಮನೆಯಿಂದ ನೀರು ತಂದು ವಿಮಾನ ನಂದಿಸಲು ಸಹಾಯ ಮಾಡಿ. ಇನ್ನೊಂದು ವಿಷಯ ಕೇಳಿಸಿಕೊಳ್ಳಿ, ಇವತ್ತಿನಿಂದ ಎಲ್ಲರ ಮನೆಯ ಮುಂದೆ Fire Extinguisher ಇಡಿ. ಇಲ್ಲಿ ತುಂಬಾ ವಿಮಾನಗಳು ಹಾರಾಡುತ್ತಾಯಿರುತ್ತವೆ. ಯಾವಾಗ ಏನು ಆಗುವುದೋ ತಿಳಿಯೋದಿಲ್ಲ"
ಆ ಸಮಯಕ್ಕೆ ಅಗ್ನಿ ಶಾಮಕ ದಳದವರು ಬಂದರು. ಬಂದ ಮೇಲೆ, ನನ್ನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು..." ಏನಪ್ಪಾ ಇವನು ನಮಗೆ ಜಾಸ್ತಿ ಕೆಲ್ಸ ಉಳಿಸಿಲ್ಲ.. ಬೆಂಕಿyಯನ್ನು ಇವನೇ ನಂದಿಸುತ್ತಾಯಿದ್ದಾನೆ." ನಂತರ ಒಂದು ನಿಮಿಷದೊಳಗೆ ಅವರು ಹೊರಟು ಹೋದರು.
ನನಗೆ ತುಂಬಾ ಬೇಜಾರಾಗಿತ್ತು. ಆ ವಿಮಾನ ದುರಂತದಿಂದ ಒಬ್ಬ ಪ್ರಯಾಣಿಕ ಕೂಡ ಜೀವಂತವಾಗಿರಲು ಸಾಧ್ಯವಿರಲಿಲ್ಲ! ಆ ಕಪ್ಪಾಗಿದ್ದ ಪ್ರದೇಶವನ್ನು ನೋಡಿ ಬರಲು ಹೊರೆಟೆ. ದಾರಿಯಲ್ಲಿ ನಾಲ್ವರು ಮಲಗಿದ್ದರು. ನಾನು ಅವರನ್ನು ಎಚ್ಚರಿಸಿ, "ಇಲ್ಲಿಯಾಕೆ ಮಲಗಿದ್ದೀರಾ?" ಅಂತ ಕೇಳಿದೆ. ಅದಕ್ಕೆ ಅವರಲ್ಲೊಬ್ಬನು "ನಾನು Spainಗೆ ಹೋಗಿಲ್ವಾ? ಎಲ್ಲಿದ್ದೀನಿ?" ಅಂತ ನನ್ನನ್ನೇ ಕೇಳಿದ. "ಅಯ್ಯೋ ನಿನ್ನ!. ನೀನು ಹೋಗುತ್ತಿದ್ದ ವಿಮಾನ ಅಪಘಾತವಾಗಿದೆ. ಅಲ್ಲಿ ನೋಡು. ಅದೇನು ಆಶ್ಚರ್ಯ ನೀವು ಇಷ್ಟೂ ಜನರು ಯಾವ ಪೆಟ್ಟಿಲ್ಲದೆ ಬದುಕುಳಿದ್ದಿದ್ದೀರ?" ಅಂತ ಮತ್ತೆ ಪ್ರಶ್ನಿಸಿದೆ.
ವಿಮಾನ ಈತರ ಕೆಳಕ್ಕೆ ಬಿದ್ದಿರೋದಕ್ಕೆ ಏನು ಕಾರಣವಿರಬಹುದು ಅಂತ ಎಲ್ಲರೂ ಯೋಚಿಸುತ್ತಿದ್ದೆವು. ಆಗ ಅವನು, "Mostly Pilot ಕುಡಿದು ಬಂದಿದ್ದಾನೆ ಅನಿಸುತ್ತೆ. ತಲೆ ಸುತ್ತಿದೆ.. ವಿಮಾನ ಓಡಿಸೋದಕ್ಕೆ ಆಗದೆ ನೆಲಕ್ಕೆ ಉರುಳಿಸಿದ್ದಾನೆ" ಅಂದ. ಅದಕ್ಕೆ ಇನ್ನೊಬ್ಬ ಇರಬಹುದು ಎಂದು ತಲೆಯಾಡಿಸಿದ. ಆಗ ನಾನು " Pilot ಕುಡಿದಿರೋದಕ್ಕೆ ಸಾಧ್ಯವಿಲ್ಲ." ಅಂದೆ. ಆಗ ಮತ್ತೊಬ್ಬ "ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಬ್ಯಾಗುಗಳನ್ನು ಚೆಕ್ ಮಾಡುತ್ತಾರೇ ಹೊರತು ನಮ್ಮ ಬಾಯಿಯನ್ನು ಅಲ್ಲ" ಅಂದ. ಹೀಗೆ ನಾವೆಲ್ಲ ಆ pilot ಕುಡಿತದ ಬಗ್ಗೆ ಮಾತಾಡುತ್ತಿರುವಾಗ ಅಮ್ಮ ಬಂದು "ಮಗು... ಎದ್ದೇಳು.. ಕಾಫಿ ಕುಡಿ... ಆಫೀಸಿಗೆ..ಹೋಗ ಬೇಕು...." ಅಂದರು..
Posted By ಅಂತರ್ವಾಣಿ at 10:47 pm 12 ಜನ ಸ್ಪಂದಿಸಿರುವರು
Wednesday, 6 May 2009
ಹಕ್ಕಿ ಹಾರ ಬಯಸಿದೆ...
ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ
ಹಕ್ಕಿಗಳದೊಂದು ಪುಟ್ಟ ಸಂಸಾರ
ಸಂಬಂಧಗಳು ಸೇರಿದಾಗದು ಸಾಗರ
ಮರವೊಂದ ಹುಡುಕಿತು ಗೂಡು ಕಟ್ಟಲು
ಉಳಿದ ಹಕ್ಕಿಗಳು ಬಂದು ಬೆನ್ನ ತಟ್ಟಲು
ಬಲವಿಲ್ಲದ ರೆಕ್ಕೆಗಳಿರೆ ಹಾರಲಸಾಧ್ಯ
ಬಲ ತುಂಬುವ ಹಕ್ಕಿಗಳಿರಲದು ಸಾಧ್ಯ
ಕಟ್ಟಾಯಿತು ಹಕ್ಕಿಗೊಂದು ಗೂಡು
ಎಷ್ಟು ಚೆಂದವಿದೆ ಅದು ನೀನೆ ನೋಡು
ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ
Posted By ಅಂತರ್ವಾಣಿ at 9:47 pm 16 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Saturday, 25 April 2009
ಹುಟ್ಟು - ಸಾವು
ಹುಟ್ಟಿನಲ್ಲಿ ಸಂತಸ
ಸಾವಿನಲ್ಲಿ ಶೋಕ
ಹೋಯಿತೊಂದು ಜೀವ
ಬಿಟ್ಟು ಈ ಲೋಕ
ಹುಟ್ಟಿನಲ್ಲಿ ಆನಂದ
ಸಾವಿನಲ್ಲಿ ಕಂಬನಿ
ನನ್ನ ಪ್ರೀತಿಸಿದ ಜೀವ
ಬಿಟ್ಟು ಹೋಯಿತು ಧರಣಿ
ಹುಟ್ಟಿನಲ್ಲಿ ಸಂಭ್ರಮ
ಸಾವಿನಲ್ಲಿ ಸಂಕಟ
ನಾ ಪ್ರೀತಿಸಿದ ಜೀವಕೆ
ಮುಂದಿಲ್ಲ ಲೋಕದ ಜಂಜಾಟ
---
ಬದುಕಿದ್ದಿದ್ದರೆ ೭೯ ವರ್ಷವಾಗಿರೋದು..
ಈಗ ೩ ತಿಂಗಳಾಗಿದೆ..
Posted By ಅಂತರ್ವಾಣಿ at 12:41 pm 9 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Friday, 10 April 2009
ಮನ ಮೆಚ್ಚಿದ...
ಆಕಸ್ಮಿಕದಿ ಸಿಕ್ಕ ಈ ಪೋರ
ಆ ದೇವರು ಕೊಟ್ಟ ವರ!
ಆಗಂತುಕನೆನೆಸಿದರೂ
ಆತ್ಮೀಯನಾದ ಚೋರ!
ಸ್ನೇಹಕ್ಕೊಪ್ಪಿಗೆ ನೀಡಿದೆ
ಸ್ನೇಹಕೂಪವ ನೋಡಿದೆ
ಮನವು ಮೆಚ್ಚಿದ ಮಿತ್ರನಿವನೆ
ಎಂದು ನಾನು ಹಿಗ್ಗಿದೆ!
ಅಭಿರುಚಿಯು ಒಂದಾಗಿದೆ
ಅಭಿಮಾನವು ಹೆಚ್ಚಾಗಿದೆ
ಜೀವನದಂತ್ಯದವರೆಗೂ
ಇವನ ಸ್ನೇಹ ಬೇಕಾಗಿದೆ!
ಅಣ್ಣನಾದ ನನಗೆ
ತಮ್ಮನಾದೆ ಅವನಿಗೆ
ವಂದಿಸುವೆ ಆ ವಿಧಿಗೆ
ವಂದಿಸುವೆ ಈ ನಿಧಿಗೆ!
Posted By ಅಂತರ್ವಾಣಿ at 9:06 pm 17 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Friday, 3 April 2009
ಅಲ್ಲೋ..? ಇಲ್ಲೋ..??
ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಚಂದಿರನಲ್ಲಿ, ಚಂದ್ರಮುಖಿಯಿಲ್ಲಿ!
ಭಾವನೆ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಜಲಪಾತವಲ್ಲಿ, ಕಪ್ಪು ಝರಿಯಿಲ್ಲಿ!
ಕಣ್ಣ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅದ ಸವಿಯಲೋ? ಇದ ಸವಿಯಲೋ?
ಜೇನು ಅಲ್ಲಿ, ಗುಲಾಬಿ ತುಟಿಯಿಲ್ಲಿ
ತುಟಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅಲ್ಲಿ ಕೇಳಲೋ? ಇಲ್ಲಿ ಕೇಳಲೋ?
ಕೋಗಿಲೆಯು ಅಲ್ಲಿ, ಇಂಪಾದ ದನಿಯಿಲ್ಲಿ
ಕಿವಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ
ಅದ ಬಯಸಲೋ? ಇದ ಬಯಸಲೋ?
ಗೊಂದಲ ನನ್ನದು
ಅದನ್ನು ಬಯಸುತಾ, ಇದನ್ನೂ ಬಯಸುವ
ಹಂಬಲ ನನ್ನದು
Posted By ಅಂತರ್ವಾಣಿ at 10:37 pm 12 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Monday, 23 March 2009
ಗುಬ್ಬಿ ಮರಿ ಎಲ್ಲಮ್ಮ?
ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?
ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ
ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ
Posted By ಅಂತರ್ವಾಣಿ at 11:00 pm 12 ಜನ ಸ್ಪಂದಿಸಿರುವರು
Wednesday, 18 March 2009
ಫಿನ್ ಲ್ಯಾಂಡಿಗೆ ಪ್ರವಾಸ (೨) - ಫಿನ್ ಲ್ಯಾಂಡಿಗೆ ಟಾಟ
ಹಿಂದಿನ ಭಾಗ
ಫೊಟೋ ಸೆಶನ್ ಆದ ಮೇಲೆ, ನಮ್ಮ Majestic ಎದುರುಗಡೆ Sangam ಚಿತ್ರಮಂದಿರ ಇತ್ತಲ್ಲಾ.. ಅದೇ ರೀತಿ ಇಲ್ಲೂ ಈ ಚಿತ್ರಮಂದಿರ ಕಾಣಿಸಿತು.ನಾಯಕನ ೫೦ ಅಡಿಯ ಕಟ್ ಔಟು, ಹೂವಿನ ಹಾರ, ಕ್ಷೀರಾಭಿಷೇಕ, ಸಿಹಿ ಹಂಚಿಕೆ ಇವೆಲ್ಲಾ ಅಲ್ಲಿ ಕಾಣಿಸಲಿಲ್ಲ ಆದರೆ ಹೊರ ಭಾಗದ ನೋಟ ನಮ್ಮ ಪುಟ್ಟಣ್ಣಚೆಟ್ಟಿ ಟೌನ್ ಹಾಲ್ ನ ಜ್ಞಾಪಿಸುತ್ತಿತ್ತು.
ಅಲ್ಲಿದ್ದ ಒಂದೆರಡು ಕಟ್ಟಡಗಳ ಚಿತ್ರ ತೆಗೆದುಕೊಂಡು, ಐಸ್ ಕ್ರೀಂ ತಿನ್ನುತ್ತಾ ಸಂಜೆ ಕಳೆದೆ.
ಗುರುವಾರ ಮತ್ತೊಂದು ಲೇಕ್:
ಆ ದಿನ ನಾನು ರೈಲ್ವೇ ನಿಲ್ದಾಣದ ಹಿಂಭಾಗದ ಕಡೆ ಹೊರಟೆ. ಕಳೆದ ಪೋಸ್ಟಿನಲ್ಲಿ ನನ್ನ ಕೈಯಲ್ಲಿದ್ದ ಪುಸ್ತಕ ದಾರಿ ತೋರಿಸುತ್ತಿತ್ತು. ಇಲ್ಲಿಯ ಸೂರ್ಯನಿಗೆ ಹೇಗೂ Overtime ಕೆಲಸ, ಹಾಗಾಗಿ ನನ್ನ ಕೆಲಸವಾದ ಮೇಲೆ ಸುತ್ತಾಟಕ್ಕೆ ತುಂಬಾ ಸಮಯ ಸಿಗುತ್ತಿತ್ತು. ಫೋಟೋಗ್ರಾಫಿಗೆ Natural light ಹೆಚ್ಚು ಸಿಗುತ್ತಿತ್ತು. ಹಾಗೆ ಸಾಗುತ್ತ ಒಂದು ಸರೋವರದ ಹತ್ತಿರ ಬಂದೆ.
ಎಲ್ಲಿ ನೋಡಿದರಲ್ಲಿ ಲೇಕುಗಳು
ಅಲ್ಲಿ ಕಾಣಿಸಲಿಲ್ಲ ಪ್ರೇಮಿಗಳು
ಕಾಣಿಸಿದ್ದು,
ಗಿಡಗಳಲ್ಲಿ ಹೂವುಗಳು
ಕಣ್ಣಿಗೊಳ್ಳೆ ನೋಟಗಳುಇಲ್ಲಿಯ ಹುಲ್ಲುಗಾವಲಿನ ಮೇಲೆ ಅಂದಿನ ಸಂಜೆ ಕಳೆದೆ. ನಂತರ ಹೊಟೆಲಿಗೆ ಬಂದು ಅಲ್ಲಿಯ ಚಿತ್ರಗಳನ್ನು ಸೆರೆ ಹಿಡಿದೆ.
ಇಲ್ಲಿ ಟಿ.ವಿಯನ್ನು ಇಟ್ಟಿದ್ದಾರಲ್ಲ.. cupboard ಅದೇ "ಮಿನಿ ಬಾರ್".
ಶುಕ್ರವಾರ ಶಾಪಿಂಗ್:
ಶುಕ್ರವಾರ ಇದ್ದ ಕೆಲಸವನ್ನು ಬೇಗನೆ ಮುಗಿಸಿ, ಸಾಮಿ, ತೆರೋ ಎಲ್ಲಾರಿಗೂ ಹೋಗಿ ಬರುತ್ತೇನೆಂದು ಹೇಳಿ ಬೇಗನೆ ಹೊರಟೆ. ದಾರಿಯಲ್ಲಿ ಭಾರತದ ವೃದ್ಧ ದಂಪತಿಗಳು ಹೆಲ್ಸಿಂಕಿ ಸುತ್ತಿಕೊಂಡು ತಾಂಪರೆಗೆ ಬಂದಿದ್ದರು. ನನ್ನ ಬಳಿ ಬಂದು ಭಾರತದ ಹೋಟೆಲು ಎಲ್ಲಿದೆ ಅಂತ ಕೇಳಿದರು. ನನಗೆ ಅದು ತಿಳಿದಿದ್ದರಿಂದ ನನ್ನೊಟ್ಟಿಗೆ ಬನ್ನಿ ತೋರಿಸಿತ್ತೇನೆ ಎಂದು ಹೇಳಲು ಅವರು, "ನಿಮಗೆ ಬೇರೆ ಏನಾದರು ಕೆಲಸವಿದ್ದರೆ ತೊಂದರೆಯಾಗ ಬಾರದು. ದಾರಿ ತೋರಿಸಿ ನಾವೇ ಹೋಗುತ್ತೇವೆ" ಅಂದರು. ನಾನು ಹೋಗುವ ಹೋಟೆಲಿನ ದಾರಿಯಲ್ಲಿ ಅದಿದೆ. ನನಗೆ ಏನು ತೊಂದರೆಯಿಲ್ಲ ಎಂದು ಅವರನ್ನು ಹೊಟೆಲಿನ ಬಳಿ ಬಿಟ್ಟು ಹೊರಟೆ.
ತಾಂಪರೆ ಫಿನ್ ಲ್ಯಾಂಡಿನ ಸಾಂಸ್ಕೃತಿಕ ರಾಜಧಾನಿ ಅನ್ನ ಬಹುದು. ಅಲ್ಲಿಯ ಜನರಿಗೆ ಅದು ಮೈಸೂರ! ಹಾಗಾಗಿ ಇಲ್ಲಿಗೆ ಅನೇಕ ಪ್ರವಾಸಿಗರು ಬರುತ್ತಿರುತ್ತಾರೆ. ಮತ್ತೊಂದು ಮಾಹಿತಿಯೆಂದರೆ ಅನೇಕ ಮಂದಿಯ ಕೈಯಲ್ಲಿರುವ "ನೋಕಿಯಾ" ಮೊಬೈಲಿನ ಉಗಮ ಸ್ಥಾನ ಕೂಡ ಈ ಫಿನ್ ಲ್ಯಾಂಡ್ ದೇಶ.
ನಾನು ಕೆಲವು chocolates ತೆಗೆದುಕೊಂಡು, Packing ಮಾಡಿ, ಬೆಳಿಗ್ಗೆ ಸುಮಾರು ೫ಕ್ಕೆ Alarm ಇಟ್ಟು ಮಲಗಿದೆ. ಬೆಳಿಗ್ಗೆ ೫.೩೦ - ೫.೪೫ ಕ್ಕೆ ಹೊಟೆಲ್ ಬಿಟ್ಟೆ. ಹೋಟೆಲ್ ಸಿಬ್ಬಂದಿಗೆ ಒಂದು ಟ್ಯಾಕ್ಸಿ ಬೇಕೆಂದು ಕೇಳಿಕೊಂಡೆ. ಆತ ಕರೆ ಮಾಡಿ ಟ್ಯಾಕ್ಸಿ ಕರೆಸಿದ. ಅದರಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಇಲ್ಲಿಂದ ನಾನು "ಟಾಟ" ಮಾಡುವ ಕೆಲಸಕ್ಕೆ ನಾಂದಿ ಹಾಡಿದೆ. ದಾರಿಯಲ್ಲಿ ಗಮನಿಸಿದ ವಿಷಯ, ರಸ್ತೆ ಖಾಲಿಯಿದ್ದರೂ, ಕೆಂಪು ದೀಪವಿದ್ದಾಗ ಟ್ಯಾಕ್ಸಿ ಚಲಿಸಲೇ ಇಲ್ಲ! ಇಂತಹ ದೃಶ್ಯ ಭಾರತದಲ್ಲಿ ಕಾಣಿಸೋದಿಲ್ಲ.
ನಾನು ತಾಂಪರೆಯಿಂದ ಹೆಲ್ಸಿಂಕಿಗೆ ಬಂದೆ. ಸಮಯ ಸುಮಾರು ೭.೪೫ ಇರಬೇಕು. ನನ್ನ ದೆಹಲಿ ವಿಮಾನ ಇದ್ದದ್ದು, ಮಧ್ಯಾಹ್ನ ೨.೨೦ಕ್ಕೆ. ಅಲ್ಲಿಯವರೆಗು ಅಲ್ಲಿ ಸಮಯಕಳೆಯುತ್ತಿದ್ದೆ. ವಿ-ಅಂಚೆ ಮೂಲಕ ನಾನು ಹೆಲ್ಸಿಂಕಿಯಲ್ಲಿದ್ದೇನೆಂದು ತಾಯಿ ದೇವರಿಗೆ ತಿಳಿಸಿದೆ. ನಂತರ ಜ್ಯೂಸ್ ಕುಡಿದು ನನ್ನ ತಿಂಡಿ ಮುಗಿಸಿ, ಎಲ್ಲಾ ಅಂಗಡಿಗಳಲ್ಲಿ Window Shopping ಮಾಡಿದೆ.
ದೆಹಲಿಯ ವಿಮಾನ ಸಜ್ಜಾಗಿತ್ತು. ಅದು ಗಗನಕ್ಕೆ ಹಾರಿ ತುಸು ನಿಮಿಷದಲ್ಲೇ ಮುಂದಿನ ಆಸನದಲ್ಲಿ ಕೂತಿದ್ದ ಎಳೆ ಕಂದಮ್ಮ ತನ್ನಷ್ಟಕ್ಕೆ ತಾನೆ "ಇಂಡಿಯಾ ಆಗಯಾ....ಇಂಡಿಯಾ ಆಗಯಾ" ಅಂತ ಹರುಷದಲ್ಲಿತ್ತು. ಈ ದೃಶ್ಯ ಕಿರು ನಗು ಮೂಡಿಸಿ, "Good Boy Bad Boy" ಸಿನಿಮಾದತ್ತ ಕಣ್ಣು ಹಾಯಿಸುವಂತೆ ಮಾಡಿತು.
[ ನಾನು ಬರೆದ ಕವನಗಳಿಗೆ ಜಾಗ ಕೊಡುವುದಕ್ಕೋಸ್ಕರ.. "ಫಿನ್ ಲ್ಯಾಂಡಿಗೆ ಪ್ರವಾಸ ಭಾಗ ೩" ಸ್ವಲ್ಪ ದಿನಗಳ ನಂತರ ಪ್ರಾರಂಭವಾಗುತ್ತದೆ.]
Posted By ಅಂತರ್ವಾಣಿ at 9:28 pm 9 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
Wednesday, 11 March 2009
ಫಿನ್ ಲ್ಯಾಂಡಿಗೆ ಪ್ರವಾಸ (೨) - ಊರು ಸುತ್ತಾಟ
ಹಿಂದಿನ ಭಾಗ
ನಾನು ಈ ಬಾರಿ ಹೊಟೆಲಿನ ಸುತ್ತ ಮುತ್ತ ಇದ್ದ ಸ್ಥಳಗಳನ್ನೆ ನೋಡಿದ್ದು.
ಮೊದಲ ದಿನ: ಪುಟ್ ಬಾಲ್ ಮ್ಯಾಚ್:
ನಾನು ಸಂಜೆ ಹೋಟೆಲಿಗೆ ಬಂದ ಮೇಲೆ, ಸ್ವಲ್ಪ Fresh ಆಗಿ, ಊರು ಸುತ್ತಾಡಲು ಹೊರಟೆ. ಹೋಟೆಲಿನ ಹತ್ತಿರದಲ್ಲೇ ಒಂದು ಪ್ರಸಿದ್ಧವಾದ ಚರ್ಚು ಇತ್ತು. ನಮ್ಮ ದೇವಸ್ಥಾನದ ಎದುರು ಗರುಡಗಂಬ ಹೇಗೆ ಇರುತ್ತೋ ಅದೇ ರೀತಿ ಈ ಚರ್ಚಿನ ಮುಂದೂ ಒಂದು ಕಂಬ ಇತ್ತು.ಇಲ್ಲಿಂದ ನಾನು ಕಚೇರಿಯ ಕಡೆ ಹೋದೆ. ಕೆಲಸಕ್ಕಲ್ಲ , ನಮ್ಮ ಕಚೇರಿಯ ಎದುರುಗಡೆಯೇ ಒಂದು ಫುಟ್ ಬಾಲ್ ಮೈದಾನವಿತ್ತು. ಅಲ್ಲಿ ಸ್ವಲ್ಪ ಹೊತ್ತು ಕಳೆಯೋಣವೆಂದು ಹೋದೆ. ಅಲ್ಲಿಯ ಜನರಿಗೆ ಅದು ಒಂದು ದೊಡ್ಡ ಮನರಂಜನೆ ನಮ್ಮಲ್ಲಿ ಕ್ರಿಕೆಟ್ ಇದ್ದ ಹಾಗೆ!
Stadium Housefull! ಸ್ವಲ್ಪ ಹೊತ್ತು ನಿಂತು ಕೊಂಡೆ ವೀಕ್ಷಿಸಿದೆ.
ಅಲ್ಲಿ ಆಟ ಇನ್ನು ಮುಗಿದಿರಲಿಲ್ಲ ನಾನು ಹೊರಟು ಬಿಟ್ಟೆ ಪಕ್ಕದಲ್ಲೇ ಇದ್ದ "Koskikeskus"ಗೆ. ಹೆಸರು ವಿಚಿತ್ರವಾಗಿದೆ ಅಲ್ವಾ? ಇದು ಅಲ್ಲಿಯ ಒಂದು ಶಾಪಿಂಗ್ ಮಾಲ್! ಅಲ್ಲಿ ಒಳಗಡೆ ಸುತ್ತಾಡಿ ಸ್ವಲ್ಪ ಹಸಿದಿತ್ತು. ಅಲ್ಲಿದ್ದ ಒಂದು ಬೇಕರಿಯಲ್ಲಿ ಹೋಗಿ, ಮೆನು ಕಾರ್ಡ್ ನೋಡಿ, ಮಾವಿನ ಹಣ್ಣಿನ ಜ್ಯೂಸ್ ತೆಗೆದು ಕೊಂಡೆ (Guarantee Pure Veg). ೨-೩ ನಿಮಿಷದಲ್ಲಿ ಅದು ತಯಾರಾಯ್ತು. ಬಿಲ್ ೩.೬೦ ಯೂರೋ ( ೨೦೦ ರೂಗಳು). ಆದರೆ ಜ್ಯೂಸ್ ಸುಮಾರು ೩೦೦ ಮಿ.ಲಿ ಇರ ಬಹುದೇನೋ.. ಹೆಚ್ಚು ಕಡಿಮೆ ಊಟದ ಹಾಗೆ ಆಗಿತ್ತು ಅಷ್ಟು ಕುಡಿದದ್ದು. ಕುಡಿಯುತ್ತಿರುವಾಗಲೇ ಅಲ್ಲಿಗೆ Stan ಬಂದರು. ಹಾಗೆ ಸ್ವಲ್ಪ ಹೊತು ಮಾತಾಡಿದೆ. ಅವರು ಫುಟ್ ಬಾಲ್ ನೋಡಲು ಹೋಗುತ್ತೇನೆಂದು ಹೊರಟರು. ನನಗೆ ಮತ್ತೇನು ನೋಡುವ ಕುತೂಹಲ ಇರಲಿಲ್ಲ ಹೊಟೆಲಿಗೆ ಬಂದು MTR ಊಟ ಮಾಡಿ ಮಲಗಿದೆ.
ಎರಡನೆ ದಿನ ಕಲ್ಲು ರಸ್ತೆಯಲ್ಲಿ ವಾಕ್!
ನಮ್ಮ ಹೋಟೆಲಿನ ಎಡ ಭಾಗದ ರಸ್ತೆಯೇ ಈ ಕಲ್ಲಿನ ರಸ್ತೆ Hämeenkatu. ಬರೀ ಕಲ್ಲಿನಿಂದ ಈ ರಸ್ತೆ ನಿರ್ಮಿಸಿದ್ದಾರೆ. ಟಾರ್ ಇಲ್ಲವೇ ಇಲ್ಲ! ಇದು ಇಲ್ಲಿಯ ಮುಖ್ಯ ರಸ್ತೆ. ರೈಲ್ವೇ ನಿಲ್ದಾಣದಿಂದ ತಾಂಪರೆ ಸಿಟಿಯ "Majestic bus stand"ಗೆ ಹೋಗುವ ದಾರಿ. ಅಲ್ಲಿಯ majestic ಹೆಸರು Keskustori! ಮತ್ತೆ ವಿಚಿತ್ರವಾದ ಹೆಸರು :). ಆ ರ್ರಸ್ತೆಯ ಚಿತ್ರ ನೋಡಿ ಇಲ್ಲಿ:
ಈ ರಸ್ತೆಯಲ್ಲಿ ಹೋಗಿ, majestic ತಲುಪಿದೆ. ಆಗ ಸಮಯ ರಾತ್ರಿ ೭.೩೦ ಇರಬಹುದೇನೋ.. ಇಷ್ಟು ಬೆಳಕು ಇತ್ತು ಅಷ್ಟೆ. ಆಗ ಅಲ್ಲಿ ಸೂರ್ಯಾಸ್ತ ೯.೩೦ ನಂತರದಲ್ಲಿ ಇರುತ್ತಿತ್ತು. ಇದು ನಿಜಕ್ಕು ಹೊಸ ಅನುಭವ. ಭಾರತದಲ್ಲಿ ಸುಮಾರು ೬.೫೦ - ೬.೫೫ ಕ್ಕೂ ಸೂರ್ಯಾಸ್ತವಾಗಿದ್ದು ನೋಡಿದ್ದೆ.
ಇದಾದ ನಂತರ ಹಿಂದಿರುಗಿ ಬಂದು ಬಿಟ್ಟೆ.
ಮೂರನೆ ದಿನ: "ಮತ್ತದೆ ರಸ್ತೆ.. ಅದೇ ವಾಕು,.. ಅದೇ ಏಕಾಂತ...."
ಈ ಹಾಡನ್ನು ಜ್ಞಾಪಿಸಿಕೊಂಡಾಗ ಮನಸ್ಸಿಗೆ ಬರುವವಳೇ ..’ಕಲ್ಯಾಣಿ’.
ನಾನು ಫಿನ್ ಲ್ಯಾಂಡಿನಲ್ಲಿ ಇದ್ದ ಮೇಲೆ ಅಲ್ಲಿಯ Lake ಗಳನ್ನು ತೋರಿಸದಿದ್ದರೆ ನೀವು ನಂಬುವುದೇ ಇಲ್ಲ ನಾನು ಫಿನ್ ಲ್ಯಾಂಡಿಗೆ ಹೋಗಿದ್ದೆ ಅಂತ. ಏಕೆಂದರೆ ಆ ನಾಡನ್ನು "Land of Thousand Lakes" ಅಂತ ಕರೆಯುತ್ತಾರೆ. ಚಿಕ್ಕವಯಸ್ಸಿನಲ್ಲಿ ಸಾಮಾನ್ಯ ಜ್ಞಾನ (General Knowledge) ಪುಸ್ತಕದಲ್ಲಿ ಓದಿದ್ದಾಗ ನಾನು ಕನಸು ಕಂಡಿರಲಿಲ್ಲ ಇಲ್ಲಿಗೆ ಬರುತ್ತೇನೆಂದು.
Keskustori (majestic) ಯ ಸಮೀಪದಲ್ಲೆ ಈ ಜಾಗವಿತ್ತು. ಅಲ್ಲೊಬ್ಬ ವಿದೇಶಿ (ಕೋರಿಯಾ ಅಥವಾ ಜಪಾನ್ ದೇಶದವನು) ಅನೇಕ ಫೋಟೋ ತೆಗಿತಾಯಿದ್ದ. ಭರ್ಜರಿಯಾದ SLR ಕ್ಯಾಮಾರವೇ ಆ ಚಿತ್ರಗಳನ್ನು ಸೆರೆಹಿಡಿಯುತ್ತಿತ್ತು . ಈತನ ಕೈಯಿಂದ ಫೋಟೋ ತೆಗೆಸಿಕೊಳ್ಳ ಬಹುದು ಎಂದು ಅವನ ಬಳಿ ಹೋಗಿ, "ದಯವಿಟ್ಟು ಒಂದು ಫೋಟೋ ತೆಗೆದು ಕೋಡುತ್ತೀರೇನ್ರಿ?" ಅಂತ ಕೇಳಿದೆ. ಅದಕ್ಕೆ ಆತ ನಿಸ್ಸಂಕೋಚವಾಗಿ "ಆಗಲ್ಲ ಕಣ್ರೀ" ಅನ್ನೋದೆ? ಆಮೇಲೆ "ಏನು ಊರಿಗೊಬ್ಬಳೇನಾ (ಒಬ್ಬನೇನಾ) ಪದ್ಮಾವತಿ (ಶ್ರೀನಿವಾಸ)?" ಅಂತ ಅಲ್ಲಿ ಸಿಕ್ಕ ಮತ್ತೊಬ್ಬರನ್ನು ಕೇಳಿದಾಗ ಆತ, ಸರಿ ತೆಗೆದು ಕೊಡುತ್ತೇನೆಂದು ಹೇಳಿ, ಈ ಫೋಟೋ ತೆಗೆದ.
Posted By ಅಂತರ್ವಾಣಿ at 11:33 pm 8 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
Friday, 27 February 2009
ಫಿನ್ ಲ್ಯಾಂಡಿಗೆ ಪ್ರವಾಸ(೨) - ಆಫೀಸಿನಲ್ಲಿ ಆಟ
ಹಿಂದಿನ ಭಾಗ
ನಾನು ಆಫೀಸಿನ ಹತ್ತಿರ ಹೋದೆ. ಆದರೆ ನಾಮ ಫಲಕ ಕಾಣದ ಕಾರಣ ದೇವರ ಗುಡಿಯನ್ನು ಪ್ರದರ್ಶಿಸುವ ಭಕ್ತನ ಹಾಗೆ ಪ್ರದಕ್ಷಿಣೆ ಮಾಡಿದೆ. ಆದರೂ ನಾಮ ಫಲಕ ಕಾಣಿಸಲಿಲ್ಲ. ಆದರೆ ತೆರೋ ತೋರಿಸಿದ ಚಿತ್ರ ಇದೇ ಹಾಗು ವಿಳಾಸ ಇದೆ. ಹಾಗಾಗಿ ಒಳಗೆ ಹೋಗಿ ಅಲ್ಲಿ ಕೇಳೋಣವೆಂದು ನುಗ್ಗಿದೆ. ಮೊದಲು ನನ್ನ ಕಣ್ಣಿಗೆ ಕಾಣಿಸಿದ್ದು Reception ಅಲ್ಲ Restaurant! Reception ಕೂಡ ಇತ್ತು. ಅವರಲ್ಲಿ, ನನ್ನ ಕಂಪನಿ ಎಲ್ಲಿದೆ ಎಂದು ಕೇಳಿಕೊಂಡು, ಹೋದೆ.
ಬಾಗಿಲು ತೆರೆದಿರಲಿಲ್ಲ. ಮತ್ತೆ "ಬಾಗಿಲನು ತೆರೆದು ಸೇವೆಯನು ಕೊಡೊ... " ಅಂತ ಹಾಡೋಣ ಅಂದುಕೊಂಡೆ.. ಆದರೆ ನನ್ನ ಕಣ್ಣಿಗೆ ಕಂಡ Switchನ್ನು ಒತ್ತಿದೆ. ನಂತರ Sami Ellonen ಬಂದು ಬಾಗಿಲು ತೆರೆದರು. "Good Morning Sami!"...
"Hey! Good Morning!" "How are you? How is the Hotel? ..." Jarkko (ಯಾರ್ಕ್ಕೊ) informed you will be coming..ಹೀಗೆ ಎಲ್ಲಾ ನಮ್ಮ ಮಾತು ನಡೆಯುತ್ತಿದ್ದಾಗ.. ಹಿಂದಿನಿಂದ ಒಂದು ದನಿ, "ಮೋಓಓಓಓರೋಓಓಓಓಓಓ". ಯಾರಪ್ಪ ಇವನು ಅಂತ ನೋಡಿದರೆ... ಅವರೇ ತೆರೋ!
"ಹಾಆಅಯ್ ಜೇಏಏಏ. ಗೂಊಊಊಊಡ್ ಮಾರ್ನಿಂಗ್". "Good Morning Tero!".. [ತೆರೋ ಅವರ ಸಂಭಾಷಣೆಯನ್ನು ನೀವು ಓದಿದರೆ ಮಜಾ ಇರೋದಿಲ್ಲ. ಅದನ್ನು ನನ್ನ ಧ್ವನಿಯಲ್ಲಿ ಕೇಳ ಬೇಕು. ಮುಂದೆ ಅವರ ದನಿಯನ್ನು ಅನುಕರಣೆ ಮಾಡಿ, ನಿಮಗೆ ಕೇಳಿಸುತ್ತೇನೆ. ] ನಾನು, ತೆರೋ ಹಾಗು ಸಾಮಿ ಕಾಫಿ ಕುಡಿದೆವು. ನಂತರ ಸಾಮಿ, ನನಗೆ Access Key ಕೊಡಿಸಿದರು. ಇದಾದ ಮೇಲೆ ನಾನು ಕೆಲಸ ಪ್ರಾರಂಭಿಸಿದೆ.
"ನಿನ್ನ ಸಹಾಯಕ್ಕೆ ಮತ್ತೊಬ್ಬರು ಬರ ಬೇಕಿದೆ, ಮಧ್ಯಾಹ್ನ ಬರುತ್ತಾರೆ" ಎಂದು ಯಾರ್ಕ್ಕೊ ವಿ-ಅಂಚೆ ಕಳಿಸಿದ್ದರು. ಅಷ್ಟರಲ್ಲಿ ಆಫೀಸ್ ತುಂಬಿತು. ಅಲ್ಲಿದ್ದವರು ತಾವಾಗಿಯೇ ನನ್ನ ಬಳಿ ಬಂದು ಅವರ ಪರಿಚಯ ಮಾಡಿಕೊಂಡರು. ಕಾರಿ, ತಪನಿ, ಕ್ರಿಸ್ಟಾ, ಬೆವೆ. ನಾವಿಷ್ಟೇ ಜನ ಆ ಆಫೀಸಿನಲ್ಲಿದ್ದದ್ದು!
ತೆರೋ ಹಾಗು ಸಾಮಿ Darts ಆಡುತ್ತಾಯಿದ್ದರು. ನಾನು ಅದನ್ನು ನೋಡಲು ಹೋದಾಗ ಆಟದ ಬಗ್ಗೆ ವಿವರಿಸಿ, ನನ್ನನ್ನೂ ಅವರೊಂದಿಗೆ ಸೇರಿಸಿ ಕೊಂಡರು. ಕ್ರಿಸ್ಟಾ ಕೂಡ ಬಂದಳು. ಕಾರಿ ಕೂಡ ಬಂದರು. ಆಫೀಸಿನ ಎಲ್ಲರೂ ಈಗ ಆಟವಾಡುತ್ತಾಯಿದ್ದರು. ಆ ಆಟ ನನಗೆ ತುಂಬಾ ಇಷ್ಟವಾಯಿತು. ಆಟ ಮುಗಿದ ಮೇಲೆ ಎಲ್ಲರೂ ಅವರವರ ಕೆಲಸದ ಕಡೆ ಗಮನ ಕೊಟ್ಟರು.
ಮಧ್ಯಾಹ್ನ ಊಟದ ಸಮಯವಾದಾಗ, ಅವರೆಲ್ಲರೂ ನನ್ನನ್ನು ಕರೆದರು. ಆಗ ನಾನು, "ನನ್ನ ಊಟ ತಂದಿದ್ದೇನೆ. ನೀವು ಹೋಗಿ ಮಾಡಿಕೊಂಡು ಬನ್ನಿ" ಅಂದೆ. ಆಗ ಕ್ರಿಸ್ಟಾ , ಆ ಓವೆನ್ ಉಪಯೋಗಿಸಿಕೋ ಬೇಕಿದ್ದರೆ ಎಂದರು. ನನ್ನ ಊಟವಾದ ಮೇಲೆ, ಸ್ವಲ್ಪ ಹೊತ್ತಿನಲ್ಲೇ "Stanislavs Lielausis" ಬಂದರು. ಇವರೊಂದಿಗೆ ಪರಿಚಯವಾದ ಮೇಲೆ, ನಾನು ಮಾಡ ಬೇಕಿದ್ದ ಕೆಲಸದಲ್ಲಿ ನನಗಿದ್ದ ಸಂದೇಹಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದೆ. ಆತನೊಂದಿಗೆ ಒಂದೆರಡು ಗಂಟೆ ಚರ್ಚೆಯಾದ ಮೇಲೆ ನನ್ನ ಸಮಸ್ಯೆಗೆ ಉತ್ತರ ಸಿಗಲಾರಂಭಿಸಿತು. ಬಂದ ಕೆಲಸ ನಿರ್ವಿಘ್ನವಾಗಿ ಮುಗಿಯುತ್ತೆ ಎಂಬ ನಂಬಿಕೆ ಬಂತು.
ಈ ವಿಷಯವನ್ನು ಯಾರ್ಕ್ಕೊ ಜೊತೆ ಮಾತಾಡಿದೆವು. ಆಗ ಅವರು "Excellent!" ಅಂದರು. ಈ integration ಕೆಲಸ ಆದ ಮೇಲೆ, ನಾನು ಹಾಗು Stan ಡಾರ್ಟ್ಸ್ ಆಡಿದೆವು. ಅವರು ಕಣ್ಣಲತೆಯ ದೂರದಲ್ಲಿದ್ದ Sokos Ilves ಎಂಬ ಹೋಟೆಲ್ ನಲ್ಲಿ ತಂಗಿದ್ದರು.
ಹೆಲ್ಸಿಂಕೆಯ ಹಾಗೆ ಇಲ್ಲೂ ಕೂಡ ೩-೪ ರ ಸಮಯಕ್ಕೆ ಹಣ್ಣುಗಳನ್ನು ತಂದು ಇಡುತ್ತಿದ್ದರು. ಅದರ ಸೇವೆಯಾದ ಮೇಲೆ ಮತ್ತೆ ಡಾರ್ಟ್ಸ್, ಚಾಟ್, ಕೆಲಸ...
ಅಲ್ಲಿಯವರೆಲ್ಲರೂ ಸಂಜೆ ೫ಕ್ಕೆ ಖಾಲಿ! ನನಗೋ ನನ್ನ ಮನಸ್ಸು ಒಪ್ಪೋದಿಲ್ಲ ಬೇಗ ಹೊಟೆಲಿಗೆ ಹೋಗೋಕೆ. ಆರು ಮೂರಾಗಲಿ ಮೂರು ಆರಾಗಲಿ, ಎಂಟು ಗಂಟೆಗಳ ಕಾಲ ಕೆಲಸ ಮಾಡಲೇ ಬೇಕು. Stan ಕೂಡ ಬೇಗ ಹೋಗುತ್ತೀನಿ, ಆಯಾಸವಾಗಿದೆ ಎಂದು ಹೊರಟ. ನಾನು ಇನ್ನು ಸ್ವಲ್ಪ ಕೆಲಸ ಮಾಡಿ, ಆರು ಗಂಟೆಗೆ ಆಫೀಸಿನಿಂದ ಹೊರಟೆ.
Posted By ಅಂತರ್ವಾಣಿ at 11:19 pm 8 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
Saturday, 21 February 2009
100 Not Out
ಇದು ನನ್ನ ನೂರನೆ ಪೋಸ್ಟ್!
ನನ್ನ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ವಂದನೆಗಳು. ಈ ಬಾರಿಯ ವಿಶೇಷವೇನೆಂದರೆ ಏನೂ ವಿಶೇಷವಿಲ್ಲ!
Flashback:
೨೦ನೇ ಪೋಸ್ಟಿಗೆ - ಬ್ಲಾಗಿನ ಟೈಟಲ್ ಇಷ್ಟವಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ" ಅಂತ ನಾಮಕರಣ.
೫೦ನೇ ಪೋಸ್ಟಿಗೆ - ನನ್ನ ಫೋಟೊ ಚೆನ್ನಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ ಲೋಗೋ" ಹಾಗು ಟೆಂಪ್ಲೇಟ್ ಬದಲಾವಣೆ.
೭೫ನೆ ಪೋಸ್ಟಿಗೆ - ಲೋಗೋ ತುಂಬಾ ಇಷ್ಟವಾಗಿ ಹೋಗಿತ್ತು ಆದ್ದರಿಂದ ಟೆಂಪ್ಲೇಟ್ ಮಾತ್ರ ಬದಲಾವಣೆ (ಈಗಿರುವ ಟೆಂಪ್ಲೇಟ್)
೧೦೦ನೇ ಪೋಸ್ಟಿಗೆ - ಈಗ ಟೆಂಪ್ಲೇಟೂ ಇಷ್ಟವಾಗಿದೆ ಹಾಗಾಗಿ ಏನೂ ಬದಲಾವಣೆಯಿಲ್ಲ.
ನನಗೆ ಕವನಗಳಲ್ಲಿ ಹೆಚ್ಚು ಒಲವು. ಕಾರಣ ಬೇಕಾದಷ್ಟು ಇವೆ.
೧) ಓದಲು ಹೆಚ್ಚು ಸಮಯ ಬೇಕಿಲ್ಲ
೨) ರಾಗ ಹಾಕಿ ಕೊಂಡು ಹಾಡ ಬಹುದು
೩) ಚೆಂದದ ಪದಗಳನ್ನು ಓದುವುದೇ ಆನಂದ
೪) ಪುಟಗಟ್ಟಲೆ ಬರೆಯುವುದನ್ನು ಕೆಲವೇ ಪದಗಳಲ್ಲಿ ಹೇಳ ಬಹುದು
೫) ಛಂದಸ್ಸಿನಲ್ಲಿ ಬರೆದರಂತೂ ಓದಲು ಆನಂದ.
ಇದುವರೆಗು ೬೧ ಕವನಗಳನ್ನು ಪೋಸ್ಟ್ ಮಾಡಿದ್ದೇನೆ. ಆ ೬೧ರಲ್ಲಿ ಕೇವಲ ೧೭ "ಪ್ರಣಯವಾಣಿ" (Romantic) ಕವನಗಳು. ನಾನು ಪ್ರಣಯವಾಣಿ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಆದರೂ ಕೆಲವು ಸಮಯ "ಪರಿಸ್ಠಿತಿ"ಗೆ ಸೋತು ಒಂದರ ಹಿಂದೊಂದು ಬರೆದು ಬಿಡುತ್ತೇನೆ.
ಕನ್ನಡಿಯೊಳಗಿನ ಗಂಟು, ಮರುಳು ಮಾತುಗಳು, ಮಕಾರದ ಮಾನಿನಿಯರು, ಯಾಕೆ ಹೀಗೆ, ಯಾರಿಗಾಗಿ ಇದು ?, ಅಪ್ಸರೆ ಇತ್ಯಾದಿ.
ಪ್ರೊ! ಕೆ.ಎಸ್.ನಿಸಾರ್ ಅಹ್ಮದ್ಅವರ ಒಂದು ಕವನದ ಸಾಲುಗಳನ್ನು ಇಲ್ಲಿ ಹೇಳ ಬಯಸುತ್ತೇನೆ
ನಿನ್ನ ನೆನಪು ಕಾಡದಂತೆ
ಕವನ ಕಟ್ಟಿ ಹಾಡದಂತೆ
ತಡೆದೆ ನಾನು ನನ್ನನೆ
[ರಾಜಕುಮಾರ್ ಭಾರತಿ ಅವರ ಕಂಠದಲ್ಲಿ ಈ ಹಾಡನ್ನು ಕೇಳಿದಾಗ ಸ್ವಪ್ನ ಲೋಕದಲ್ಲೇ ಇದ್ದೆ]
ಇದುವರೆಗೂ ಬರೆದ ಕವನಗಳಲ್ಲಿ ಒಂದು ಅಪೂರ್ಣವಾದ ಕವನವಿದೆ! ಆ ಕವನ ಬರೆಯುವಾಗ ಅದೆಷ್ಟೋ ಬಾರಿ ಕಂಬನಿ ಒರೆಸಿ ಕೊಳ್ಳುತ್ತಿದ್ದೆ. ಕವನವನ್ನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದಲ್ಲ, ಆ ಕವನದ ನಾಯಕನ ಸ್ಥಿತಿ ಕುರಿತು ಯೋಚಿಸುತ್ತಾ.
ಆ ಕವನ ಇಲ್ಲಿದೆ.
[ಈ ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ... ಹೇಗೆ ಪೂರ್ಣಗೊಳಿಸಲಿ ಎಂದು ಸಲಹೆ ನೀಡಿ]
Posted By ಅಂತರ್ವಾಣಿ at 11:04 pm 18 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Saturday, 14 February 2009
ಫಿನ್ ಲ್ಯಾಂಡಿಗೆ ಪ್ರವಾಸ (೨) - ಶಂಕ್ರಾ ನೀ ಬೇಗನೆ ಬಾರೋ....
ನನ್ನ ಮ್ಯಾನೇಜರ್, "ಶಂಕ್ರಾ ನೀ ಬೇಗನೆ ಬಾರೋ...." ಅಂತ ಕಲ್ಯಾಣಿ ರಾಗದಲ್ಲಿ ಹಾಡುತ್ತಿದ್ದ ಹಾಗೆ ನಾನು ಎರಡನೆ ಬಾರಿ ಫಿನ್ ಲ್ಯಾಂಡಿಗೆ ಹಾರ ಬೇಕಾಯಿತು. ಆಗಸ್ಟ್ ೧೧, ೨೦೦೭
ಮಾರ್ಚ್ ೨೦೦೭ರಲ್ಲಿ ಬೆಂಗಳೂರಿಗೆ ಬಂದು, ಇಲ್ಲಿಯೇ ಕೆಲಸ ನಿರ್ವಹಿಸುತ್ತಾಯಿದ್ದೆ. ಅನೇಕ ರೀತಿಯಾದ ಕಷ್ಟಗಳು ಇದ್ದವು. ಹಾಗೂ ಹೀಗೂ Design & development ಆಯ್ತು. ಇದನ್ನು Integration ಮಾಡ ಬೇಕಿತ್ತು. ನಾನು ಹಲವಾರು ದಿನ ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ದಿನಕ್ಕೆ ಹತ್ತಾರು ವಿ-ಅಂಚೆಗಳು, ಫೋನ್ ಕಾಲುಗಳು ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಆಗ ಯಾರ್ಕ್ಕೊ ನನ್ನನ್ನು ಪುನಃ ಫಿನ್ ಲ್ಯಾಂಡಿಗೆ ಕರೆಸಿಕೊಳ್ಳಲು ನಿರ್ಧಾರ ಮಾಡಿ, ಅದರ ವ್ಯವಸ್ಥೆ ಮಾಡಿಕೊ ಅಂದರು. ಎರಡು ವಾರ ಬರಬೇಕು ಎಂದು ಹೇಳಿದರು. ನಾನು ವೀಸಾ ಅರ್ಜಿ ಹಾಕಿ, ಬೆಂಗಳೂರು - ದೆಹಲಿ, ದೆಹಲಿ - ಹೆಲ್ಸಿಂಕಿ, ಹೆಲ್ಸಿಂಕಿ - ತಾಂಪರೆ ಗೆ ಟಿಕೆಟ್ ಕಾದಿರಿಸಿದೆ. ಆಮೇಲೆ ಅದೇಕೋ ಮನಸ್ಸು ಬದಲಿಸಿ, ಒಂದು ವಾರ ಸಾಕು ಎಂದು ಹೇಳಿದರು. ನಾನು ಅವರಿಗೆ ಹೋಟೆಲ್ ಕಾದಿರಿಸಿ ಎಂದು ಕೇಳಿಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಹೊಟೆಲಿನ ಕಾದಿರಿಸಿದ ವಿ-ಅಂಚೆಯನ್ನು ಕಳುಹಿಸಿದರು. Scandic Tampere City ಎಂಬ ಹೋಟೆಲು. ಈ ಬಾರಿ ನಾನೊಬ್ಬನೆ ಹೋಗ ಬೇಕಿತ್ತು. ತೆರೋಗೆ ನಾನು ಬರುವ ವಿಚಾರವನ್ನು ಯಾರ್ಕ್ಕೊ ಹೇಳಿದ್ದರಿಂದ, ತೆರೋ ನನಗಾಗಿ ಹೊಟೆಲಿನಿಂದ ಕಚೇರಿಗೆ ಬರುವ ದಾರಿಯನ್ನು ಹೇಳಿದ್ದರು. ಅಲ್ಲದೆ ಕಚೇರಿಯ ಒಂದು ಚಿತ್ರವನ್ನೂ ಸಹ ಕಳುಹಿಸಿ ಕೊಟ್ಟಿದ್ದರು. ಅವರ ದೂರವಾಣಿ ಸಂಖ್ಯೆಯನ್ನೂ ಕೊಟ್ಟರು ತಿಳಿಯದೇ ಇದ್ದಲ್ಲಿ ಕರೆ ಕೊಡು ಎಂದರು.
ನಾನು ಹಿಂದಿನ ಸಲದಂತೆ MTR ತಿನಿಸುಗಳನ್ನು ತೆಗೆದುಕೊಂಡಿದ್ದೆ. ಒಂದು ವಾರದ ಮಟ್ಟಿಗೆ ಆದ್ದರಿಂದ ನಾನು ನಳ ಮಹಾರಾಜನನ್ನು ಆವಾಹನೆ ಮಾಡಲಿಲ್ಲ. ಅಪ್ಪ ಟ್ಯಾಕ್ಸಿಗೆ ಹೇಳಿದ್ದರು. ಹಿಂದಿನ ಬಾರಿ ಬಂದಿದ್ದ Ambassador ಈ ಬರಿಯೂ ಬಂತು. ಅದರಿಂದ ವಿಮಾನ ನಿಲ್ದಾಣ ತಲುಪಿದೆವು. ಸ್ವಲ್ಪ ಹೊತ್ತು ಅಪ್ಪ ಅಮ್ಮರೊಂದಿಗೆ ಮಾತಾಡಿ, Boarding Pass ತೆಗೆದು ಕೊಂಡು Security Checkಗೆ ಹೋದೆ. ಅಲ್ಲಿ ನಟ ಅವಿನಾಶ್ ಅವರನ್ನು ನೋಡಿ, ಮಾತಾಡಿಸಿದೆ. ನನ್ನ ಮುಂದೆಯೇ ಅವರಿದ್ದರು. ಹಸ್ತಲಾಘವ ಆದ ಮೇಲೆ ಬೇರೇನು ಮಾತಾಡಲು ನನಗೆ ತೋಚಲಿಲ್ಲ. ಅವರ ಜಾಗದಲ್ಲಿ ನಮ್ಮ ಗುರು ವಿಷ್ಣು ಇದ್ದಿದ್ದರೆ ಅದರ ಮಜಾನೇ ಬೇರೆ!..
ಈ ಬಾರಿ ನಾನು ಕಿಂಗ್ ಫಿಷರ್ ನಲ್ಲಿ ದೆಹಲಿಗೆ ಹೋಗಿದ್ದು. ಅಲ್ಲಿ ಪುರುಷ ಏರ್ ಹೋಸ್ಟ್ ಇರುವುದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತು! ಅಲ್ಲಿಯ ಕೆಂಪು ಹುಡುಗಿಯರು ತಂಪು ಪಾನೀಯ ಕೊಟ್ಟಾಗ ಕುಡಿಯೋ ಮಜಾನೇ ಬೇರೆ..ಆದರೆ ಅವರ ಭಾಷೆ ಯಾವರೀತಿವಿರುತ್ತದೆ ಎಂದರೆ, ನನ್ನಂತಹ ಅಲ್ಪ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಬಾರಿಗೆ ಅರ್ಥವಾಗದು. ಎರಡು ಮೂರು ಬಾರಿ ಕೇಳ ಬೇಕು.. ಏನಮ್ಮ ಹೇಳಿದ್ದು ನೀನು? ಅಂತ. ಕಿಂಗ್ ಫಿಷರ್ನಲ್ಲಿ ಒಬ್ಬರಿಗೊಂದು ಟಿ.ವಿ. ಕೊಟ್ಟಿರುತ್ತಾರೆ. ಕೆಲವು ಚಾನೆಲ್ಲುಗಳು ಹಾಗು ರೇಡಿಯೋ ಕೂಡ ಬರುತ್ತಿತ್ತು. ನಾನು ಶಾಸ್ತ್ರೀಯ ಸಂಗೀತ ಕೇಳುತ್ತಾ ಪ್ರಯಾಣ ಮುಗಿಸಿದೆ.
ದೆಹಲಿಯಲ್ಲಿ ಇಳಿದು ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು ನನಗೆ ಅನುಭವವಿದ್ದರಿಂದ ಎಲ್ಲೂ ಕಷ್ಟವಾಗಲಿಲ್ಲ. ನಂತರ ಹೆಲ್ಸಿಂಕಿಗೆ Boarding Pass ತೆಗೆದು ಕೊಳ್ಳುವಾಗ, ಆಕೆ ನಿಮ್ಮ Final Destination ಎಲ್ಲಿ ಎಂದು ಕೇಳಿದರು. ನಾನು ತಾಂಪರೆ ಎಂದೆ. ಅದರ ಟಿಕೆಟ್ ನನ್ನಿಂದ ಪಡೆದು ಕೊಂಡು, ಹಲ್ಸಿಂಕಿ - ತಾಂಪರೆಗೂ ಸಹ Boarding Pass ಕೊಟ್ಟರು. ದೆಹಲಿಯಿಂದ ಹೆಲ್ಸಿಂಕಿಗೆ ಪ್ರಯಾಣ ಬೆಳಸಿದೆ. ಅಲ್ಲಿ ಸೇರಿದಾಗ ಸಮಯ ೭.೩೦ -೮ ಇರಬೇಕು. ಹಿಂದ ಬಾರಿಯಂತೆ ನನ್ನ ಒಬ್ಬ ಅಧಿಕಾರಿ ಪ್ರಶ್ನಿಸಿದ, ಟಿಕೆಟ್ ಗಳನ್ನು ಪರಿಶೀಲಿಸಿ ಮುಂದೆ ಸಾಗಲು ಬಿಟ್ಟ. Immigration ಬಳಿ ಸ್ವಲ್ಪ ಕಿರಿಕಿರಿ ಮಾಡಿದರು. ನನ್ನ ಪಾಸ್ಪೋರ್ಟ್ ಹೆಸರು ಹಾಗು ಟಿಕೆಟಿನಲ್ಲಿದ್ದ ಹೆಸರು ಸ್ವಲ್ಪ ವ್ಯತ್ಯಾಸವಿತ್ತು. ನಮ್ಮ ಊರಿನ ಹೆಸರು ಮೊದಲಿತ್ತು ಪಾಸ್ಪೋರ್ಟಿನಲ್ಲಿ. ಆದರೆ ಈ ಸಂಸ್ಥೆಗೆ ಸೇರಿದಾಗ ನನ್ನ ಊರಿನ ಹೆಸರನ್ನು ಕೊನೆಗೆ ಹಾಗಿದ್ದರು. ಮೀಸೆ ತೆಗೆದಿದಾಗಿನ ಚಿತ್ರವನ್ನು ಪಾಸ್ಪೋರ್ಟಿನಲ್ಲಿ ಹಾಕಿದ್ದೆ. ಆಮೇಲೆ ನನ್ನ ಮುಗ್ಧಮೊಗ ನೋಡಿ ಎಲ್ಲಿಗೆ ಹೋಗುತ್ತಾಯಿದ್ದೀಯ ಅಂತ ಕೇಳಿದರು. ತಾಂಪರೆಯೆಂದೆ. By Aircraft? ಎಂದರು... Yes ಎಂದೆ. Domestic ನಿಲ್ದಾಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದೆ. ಆತ ದಾರಿ ತೋರಿಸಿದ.
ಅಲ್ಲಿ ಡೊಮೆಸ್ಟಿಕ್ ಏರ್ ಪೋರ್ಟಿಗೆ ಹೋದೆ. ಅಲ್ಲೆಲ್ಲೂ ನನ್ನ ಕಣ್ಣಿಗೆ ದೂರವಾಣಿ ಕಾಣಲಿಲ್ಲ. ಅಲ್ಲೊಬ್ಬರನ್ನು ಕೇಳಲು, International Airport ಹೋಗಬೇಕು ಎಂದರು. ಪುನಃ ಅಲ್ಲಿಯವರೆಗು ನನ್ನ ಆಸ್ತಿಗಳನ್ನು ಎಳೆದು ಕೊಂಡು ಹೋಗಿ, ಮನೆಗೆ ಫೋನು ಮಾಡಿದೆ. ನಂತರ Fresh ಆದೆ. ಸಮಯ ಸುಮಾರು ೮.೩೦ ಇರಬೇಕು. ನನ್ನ ತಾಂಪರೆಯ ವಿಮಾನ ಇದ್ದದ್ದು ಮಧ್ಯಾಹ್ನ ೧.೩೦ ಕ್ಕೆ. ಅಲ್ಲಿಯವರೆಗೂ ಸಮಯ ಕಳೆಯ ಬೇಕಿತ್ತು. ಸರಿಯಾದ ನಿದ್ದೆ ಇಲ್ಲದ ಕಾರಣ, ಮಲಗಲು ಪ್ರಯತ್ನ ಮಾಡಿದೆ. ಅದಕ್ಕಾಗಿ ಮೊದಲಿಗೆ ೯.೩೦ ಕೆ Alarm ಇಟ್ಟುಕೊಂಡೆ. ಆದರೂ ಅದೇಕೋ ನಿದ್ದೆ ಬಾರಲಿಲ್ಲ. ಲಗ್ಗೇಜು ಕಳ್ಳತನವಾಗಬಹುದೇನೋ ಎಂಬ ಭಯ ಒಂದೆಡೆ, ವಿಪರೀತ ನಿದ್ರಿಸಿ, ತಾಂಪರೆ ವಿಮಾನ ತಪ್ಪಿಹೋಗ ಬಹುದೇನೋ ಎಂಬು ಆತಂಕ ಮತ್ತೊಂದೆಡೆ.
ಹೊಟ್ಟೆ ಹಸಿವು ಸ್ವಲ್ಪವಿತ್ತು. ಅಲ್ಲಿದ್ದ ಒಂದು ಅಂಗಡಿಗೆ, Biscuits ತೆಗೆದು ಕೊಳ್ಳೋಣವೆಂದು ಹೋದೆ. ಆಕೆಗೆ ಅದನ್ನು ಕೇಳಿದೆ. ತಿಳಯದವಳಂತೆ ಆಡಿದಳು. ಅದಕ್ಕೆ Cookies ಅಂತ ಕೇಳಿದೆ. ಗೊತ್ತಿಲ್ಲ ಅಂದಳು. ನಾನೇ ಹೋಗಿ ಜಾಲಾಡಿ ಒಂದು ಪ್ಯಾಕ್ ತೆಗೆದುಕೊಂಡು ಬಂದೆ. ಮೊದಲನೆಯದನ್ನು ತಿಂದು.. ನಾಯಿಗೆ ಹಾಕೋ ಬಿಸ್ಕತ್ತು ತಂದು ಬಿಟ್ಟಿದ್ದೀನಾ ಅಂತ ನೋಡಿದೆ. ಅಲ್ಲೇಲ್ಲೂ ನಾಯಿಯ ಚಿತ್ರವಿರಲಿಲ್ಲ. ಹಾಗಾಗಿ ಇದು ಮನುಷ್ಯರು ತಿನ್ನ ಬಹುದೆಂದು ನಿರ್ಧರಿಸಿದೆ. ಆದರೆ ರುಚಿ.... ಕೇಳ ಬೇಡಿ. ಏನೇನು ಪದಾರ್ಥ ಹಾಕಿದ್ದಾರೆ ಎಂದು ನೋಡಿದೆ. ೩ ಅಕ್ಷರದ ಒಂದು ಪದ ಕಾಣಿಸಿತು್, "Egg".
ಅಲ್ಲಿಯೇ ಹೀಗೆ ಸಮಯ ಕಳೆದೆ. ತಾಂಪರೆಗೆ ಸಂಬಂಧಿಸಿದ ಪುಸ್ತಕವನ್ನು ಓದುತ್ತಾಯಿದ್ದೆ. ಅಲ್ಲಿಂದ ಮಧ್ಯಾಹ್ನ ವಿಮಾನ ಹಾರುವ ಮುಂಚೆ, ನನ್ನ ಸೀಟ್ ನಂಬರ್ ಕೊಟ್ಟಿರಲಿಲ್ಲ. ಅದನ್ನು ಅಲ್ಲಿಯ Finnair Counter ಬಳಿ ಕೇಳಿದೆ. ಅದಕ್ಕೆ ಆಕೆ, ಎಲ್ಲಿ ಬೇಕಾದರೂ ಹೋಗಿ ಕುಳಿತುಕೊ ಅಂದಳು. ವಿಮಾನ ತುಂಬಾ ಚಿಕ್ಕದಿತ್ತು. ಅದರ ರೆಕ್ಕೆಗಳು ಬೇರೆ ವಿನ್ಯಾಸದ್ದು. ಕೇವಲ ೬೦-೭೦ ಜನ ಕೂರಬಹುದಾದಂತಹ ವಿಮಾನ. ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ವಿಮಾನದಲ್ಲಿ ತಿನ್ನಲು ಒಂದು Chocolate ಕೊಟ್ಟಿದ್ದರು. ವಿಮಾನದ ಹಾರಾಟದಲ್ಲಿ ಅನೇಕ ಬೆಟ್ಟಗಳು, ಕೊಳಗಳು ಕಂಡಿತು. ತಾಂಪರೆಗೆ ಕೇವಲ ೨೦ ನಿಮಿಷದ ಹಾರಾಟ ಮಾತ್ರವೇ ಆಗಿತ್ತು. ಇಪ್ಪತ್ತು ನಿಮಿಷದ ಹಾರಾಟಕ್ಕೆ ಬೆಳಿಗ್ಗೆಯಿಂದ ಕುಳಿತು, ಸಮಯ ವ್ಯರ್ಥ ಮಾಡಿದೆ ಅನಿಸಿತು.
ತಾಂಪರೆಯಲ್ಲಿ ಲಗ್ಗೇಜನ್ನು ತೆಗೆದುಕೊಂಡು ಟ್ಯಾಕ್ಸಿಯೊಂದನ್ನು ಹುಡುಕಿ, Hotel Scandic Tampere City ಗೆ ಕರೆದುಕೊಂಡು ಹೋಗು ಎಂದೆ. ಆತ ನನ್ನ ಆಸ್ತಿಯನ್ನು ಡಿಕ್ಕಿಯಲ್ಲಿ ಹಾಕಿ, ಸ್ವಲ್ಪ ಸಮಯದಲ್ಲೇ ಹೊಟೆಲಿಗೆ ತಲುಪಿಸಿದ. ತಾಂಪರೆಯಲ್ಲಿ ಆಗ ಚಳಿ ಇರಲಿಲ್ಲ. ಸಾಮಾನ್ಯ ಹವಾಮಾನವಿತ್ತು. ನಾನು ಹೋಟೆಲ್ ಸೇರಿದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದು ಕೊಂಡು, ನನ್ನ ಆಫೀಸನ್ನು ನೋಡಿಕೊಂಡು ಬರಲು ಹೊರಟೆ. ಅಲ್ಲಿದ್ದ ತಾಂಪರೆಯ ನಕ್ಷೆಯನ್ನು ತೆಗೆದು ಕೊಂಡು ಹೊರಟೆ. ಹೊಟೆಲಿನ ಎದುರುಗಡೆಯೇ ಅಲ್ಲಿಯ ರೈಲು ನಿಲ್ದಾಣವಿತ್ತು. ಹೋಗುವ ದಾರಿಯಲ್ಲಿ ಒಂದು ಹಳೇ ಚರ್ಚು ಇತ್ತು. ಅದರ ಹತ್ತಿರದಲ್ಲೇ ಬಸ್ ನಿಲ್ದಾಣವಿತ್ತು. ಅದರ ಬಳಿಯೇ ನಮ್ಮ ಕಚೇರಿಯಿತ್ತು. ನಮ್ಮ ಕಚೇರಿಯ ನಾಮ ಫಲಕ್ಕಕಾಗಿ ಹುಡುಕಿದೆ ಆದರೆ ಸಿಗಲಿಲ್ಲ. ತೆರೋ ತೋರಿಸಿದ ಚಿತ್ರವೇನೊ ಇದೇ ಆಗಿತ್ತು. ಆದರೆ ನಾಮ ಫಲಕ ಇಲ್ಲ. ಸರಿ ನಾಳೆ ಬಂದು ನೋಡಿದರಾಯಿತು ಎಂದು ಪುನಃ ಹಿಂದಿರುಗಿದೆ. ಇಷ್ಟು ಹೊತ್ತಿಗೆ ಸಂಜೆ ಆರು. ಸ್ವಲ್ಪ ಸಿಹಿ ಹಾಗು ಖಾರ ತಿನಿಸುಗಳನ್ನು ತಿಂದು, ಟಿ.ವಿ.ಯನ್ನು ನೋಡುತ್ತಾಯಿದ್ದೆ. ೭.೩೦ಕ್ಕೆ ಊಟ ಮಾಡಿ ಮಲಗಿದೆ.
Posted By ಅಂತರ್ವಾಣಿ at 12:04 am 16 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
Friday, 6 February 2009
ಮೊದಲ ಭಾಮಿನಿ
ಬಾಳ ದೋಣಿಯ ಅಂಬಿಗ ಶ್ರೀ ಹರೀಶ್, ಭಾಮಿನಿ ಷಟ್ಪದಿಯಲ್ಲೊಂದು ಕವನ ರಚಿಸುವಂತೆ ಹುಳ ಬಿಟ್ಟು, ಭಾಮಿನಿಯ ಕುರಿತು ಮಾಹಿತಿ ಕೊಟ್ಟು, ಈ ಕೆಲಸಕ್ಕೆ ಕೈ ಹಾಕುವಂತೆ ಮಾಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.
ಸದ್ಯದ ನನ್ನ ಪರಿಸ್ಥಿತಿಯನ್ನು ಭಾಮಿನಿಯಲ್ಲೇ ಹೇಳುತ್ತಾಯಿದ್ದೀನಿ.
ಮನದಿ ಭಾಮಿನಿಯ ಆಸೆಯಿಟ್ಟ
ಬಾನ ನೋಡುತ ಯೋಚಿಸಿದೆ ನಾ
ಜೇನಿನ ನುಡಿಗಳು ಸಿಗುವ ಕಾಯಕ ನಡೆದಿದೆ ಈಗ
ಕಾನನದಿ, ಪರಿಸರದಿ ಹುಡುಕಿಹೆ
ಅನವರತ ಮನಸನ್ನು ಕೆದಕಿಹೆ
ನನಗೆ ತಿಳಿಯದ ಶಕ್ತಿ ಬರೆಸಿಹ ಮೊದಲ ಕವನವಿದು
Posted By ಅಂತರ್ವಾಣಿ at 11:33 pm 16 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Friday, 30 January 2009
ಬೆಕ್ಕಿಗೆ ಕೋಪ ಬಂದಿದೆ
ಬೆಕ್ಕಿಗೆ ಕೋಪ ಬಂದಿದೆ
ಹಾಲು ಮೊಸರು ಕಾಣದೆ
ಇನ್ನೂ ಕೋಪ ಬಂದಿದೆ
ಇಲಿಗಳು ಕಣ್ಣಿಗೆ ಬೀಳದೆ!
ಸದ್ದಿಲ್ಲದೆ ಬರುವುದು ಸದಾ
ಎಣಿಸದೆ ರಾತ್ರಿ ಹಗಲು
ಹತ್ತಾರು ಮನೆಗಳು ಇದಕ್ಕಿದೆ
ಹಾಲು ಮೊಸರು ಸವಿಯಲು
ಗಿಡ್ದ ದೇಹ, ದೊಡ್ಡ ದನಿ
ಕಣ್ಣಿನೊಳಗಿದೆ ಕನಿ!
ಬಿಡುವಿಲ್ಲದ ಮಿಯಾವಿಗೆ
ಕೊಡುತ್ತಿದ್ದೇನೆ ಕಿವಿ!
[ ಇದು "ಶಿಶುವಾಣಿ" ವಿಭಾಗದಲ್ಲಿನ ಎರಡನೆ ಕವನ]
Posted By ಅಂತರ್ವಾಣಿ at 11:17 pm 13 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು, ಶಿಶುವಾಣಿ
Monday, 26 January 2009
ಕಪ್ಪು ಝರಿ
ಬಿಳಿ ಬಂಡೆಯಿಂದ ಉದ್ಭವಿಸಿದ ಕಪ್ಪು ಝರಿ
ಸಹಸ್ರಾರು ರಂಧ್ರಗಳ ಕೊರೆದು ಹರಿಯುತಿದೆ
ಸೂರ್ಯನ ಪ್ರತಿಬಿಂಬವ ತೋರಿಸುವ ಕಪ್ಪು ಝರಿ
ಅಲೆ ಅಲೆಯಾಗಿ ಕರದ ಮೇಲೆ ಹರಿಯುತಿದೆ.
ಇಂದುಮುಖಿಯ ಹಿಂದಿರುವ ಕಪ್ಪು ಝರಿ
ತಂಗಾಳಿಗೆ ತೂರಾಡುತಿದೆ
ತನು ಮನವ ತಂಪುಗೊಳಿಸುವ ಕಪ್ಪು ಝರಿ
ನಯಾಗರಕ್ಕೆ ಸವಾಲೊಡ್ಡಿದೆ!
Posted By ಅಂತರ್ವಾಣಿ at 10:06 pm 10 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic ), ವಿಶೇಷ ಕವನಗಳು
Monday, 19 January 2009
ಕನ್ನಡಿಯೊಳಗಿನ ಗಂಟು!
ಕನ್ನಡಿ ತೋರುತಿಹ ಪ್ರತಿಬಿಂಬ ನಿನ್ನದೆ
ಕಣ್ಣು ನೋಡುತಿಹ ಪ್ರತಿ ನೋಟವೂ ನಿನ್ನದೆ
ಪ್ರತಿಬಿಂಬವ ಹಿಡಿದರೆ ನಿನ್ನ ಗಲ್ಲ ಹಿಡಿದಂತಲ್ಲ!
ಪ್ರತಿಬಿಂಬವ ಚುಂಬಿಸಿದರೆ ನಿನ್ನ ತುಟಿ ಸಿಹಿಯಾದಂತಲ್ಲ!
ಪ್ರತಿಬಿಂಬವ ಅಪ್ಪಿದರೆ ನೀ ನನ್ನವಳೆಂದಲ್ಲ
ಪುಷ್ಪವೃಷ್ಟಿಯ ಹರಿಸಿದರೆ ನಿನ್ನ ಪೂಜಿಸಿದಂತಲ್ಲ
ಪ್ರತಿಬಿಂಬಕ್ಕೆ ಸೀರೆ ಉಡಿಸಲಾದೀತೆ?
ಪ್ರತಿಬಿಂಬದ ಹಣೆ ಸಿಂಗರಿಸಲಾದೀತೆ?
ಪ್ರತಿಬಿಂಬಕ್ಕೆ ಜಡೆ ಹೆಣೆಯಲಾದೀತೆ?
ಪ್ರತಿಬಿಂಬಕ್ಕೆ ಹೂವ ಮುಡಿಸಲಾದೀತೆ?
ಭ್ರಮೆಯ ಲೋಕದಲ್ಲಿದ್ದವನು ನಾನು
ನೈಜ ಲೋಕದ ವಿಚಾರ ಹೇಳಬೇಕಿನ್ನು
ನನಗೂ ನಿನಗೂ ಎಲ್ಲಿಯ ನಂಟು
ನೀನೊಂದು ಕನ್ನಡಿಯೊಳಗಿನ ಗಂಟು!
Posted By ಅಂತರ್ವಾಣಿ at 11:18 pm 14 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Saturday, 10 January 2009
ನಿರೀಕ್ಷೆಗಳೇ ಬೇಸರದ ಮೂಲ
ವಿಧ ವಿಧವಾದ ನಿರೀಕ್ಷೆಗಳೇತಕೆ?
ವಿಧಾತನು ಅದನ್ನು ವಿರೋಧಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ಪರಿ ಪರಿಯ ನಿರೀಕ್ಷೆಗಳೇಕೆ ಮನದಲ್ಲಿ?
ಹರಿಯು ಅದನ್ನು ಹುಸಿಯಾಗಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ನಿರೀಕ್ಷೆಗಳಿಗಿಡು ಪೂರ್ಣವಿರಾಮ
ಈಡೇರದಿರೆ ಅವು, ಚಿತ್ತ ನಿರ್ನಾಮ!
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
Posted By ಅಂತರ್ವಾಣಿ at 5:25 pm 13 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು
Sunday, 4 January 2009
ನಾನು ಸತ್ತ ಮೇಲೆ
ಬಹಳ ದಿನಗಳ ಹಿಂದೆ ನನಗೆ ವಿಪರೀತ ಜ್ವರವಿತ್ತು. ಆ ರಾತ್ರಿ ನಾನು ಮಲಗಿದೆ. ಮುಂಜಾನೆಯ ರವಿಯನ್ನು ನೋಡುತ್ತೇನೋ ಇಲ್ಲವೋ ಅನ್ನಿಸಿತ್ತು. ಇದ್ದಕ್ಕಿದ್ದ ಹಾಗೆ ನನ್ನ ದೇಹದ ತಾಪಮಾನ ಹೆಚ್ಚಾಗಿ ನಾನು ಸತ್ತು ಹೋದೆ!
ನನ್ನ ಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸುತ್ತಿದ್ದದ್ದು ನನಗೆ ಗೊತ್ತಾಗುತ್ತಿತ್ತು. ಗೆಳೆಯರು, ಬಂಧು ಬಳಗದವರೆಲ್ಲರೂ ಸೇರಿದ್ದರು. ಅವರ ಕಂಬನಿಯು ನನಗೆ ಕಾಣುತ್ತಿತ್ತು. ನನ್ನ ಬಗ್ಗೆ ಆಡುತ್ತಿದ್ದ ಒಳ್ಳೆ ಮಾತುಗಳು ಕೇಳಿಸುತ್ತಾಯಿತ್ತು. ಅವರಿಗೆ ಸಮಾಧಾನ ಹೇಳ ಬೇಕೆಂದೆನಿಸಿತು. ಆದರೆ ನಾನು ಹೆಣ! ಹೇಗೆ ಮಾತನಾಡಲು ಸಾಧ್ಯ?
ಮಸಣದ ಕಡೆಗೆ ನನ್ನ ಹೊತ್ತಿಕೊಂಡು ಹೋದರು. ಇದೆಲ್ಲಾ ನನಗೆ ಗೊತ್ತಾಗುತ್ತಿತ್ತು. ನಾನು ನನ್ನಲ್ಲೇ ಹೇಳಿಕೊಂಡೆನು "ನಾನು ಸತ್ತಿರೋದು ನಿಜ. ಆದರೂ ನಾನು ಸಾಮಾನ್ಯರಂತೆ ಇದ್ದೀನಲ್ಲ. ಹೋ!...ಬಹುಶಃ ಮೊದಲ ಬಾರಿ ಸತ್ತಿದ್ದರಿಂದ ಈ ರೀತಿ ಎಲ್ಲವೂ ತಿಳಿಯುತ್ತಿದೆ" ಎಂದು ಸಮಾಧಾನ ಮಾಡಿಕೊಂಡೆ. ಅಗ್ನಿ ಸ್ಪರ್ಶ ಮಾಡುವುನ್ನು ನಾನು ತಡೆಯಲೇ ಇಲ್ಲ. ಅಗ್ನಿ ನನ್ನ ಸುಟ್ಟಾಗ ಎಷ್ಟರ ಮಟ್ಟಿಗೆ ಬಿಸಿಯಾಗಬಹುದು? ಅಂತ ಯೋಚನೆ ಮಾಡುತ್ತಾಯಿದ್ದೆ. ಬೇಗ ಸುಟ್ಟು ನನ್ನ ಬೂದಿ ಮಾಡಿದರೆ ಸಾಕಪ್ಪ... ಈ ಪ್ರಪಂಚದ ಋಣ ತೀರಿತೆಂದು ಆರಾಮವಾಗಿರ ಬಹುದು ಅಂತ ಯೋಚಿಸುತ್ತಿದ್ದೆ. ಅಗ್ನಿಯು ನನ್ನ ದಹಿಸುತ್ತಾಯಿದ್ದ. ನನ್ನ ಬೆನ್ನಿಗೆ ಅದರ ಅರಿವಾಗುತ್ತಾಯಿತ್ತು. ಆದರೂ ಕಿರುಚಲಿಲ್ಲ. ಅಗ್ನಿಗೆ ನನ್ನ ಮುಖವನ್ನು ಸುಡುವ ಆಸೆಯಾಯಿತು. ಆ ಕೆಲಸವನ್ನು ಪ್ರಾರಂಭಿಸಿದ. ಅವನ ಶಾಖ ಈಗ ವಿಪರೀತವಿತ್ತು. ನನ್ನ ಹೆಣಕ್ಕೆ ಅದನ್ನು ತಡೆಯಲು ಶಕ್ತಿಯಿರಲಿಲ್ಲ! ಚಿತೆಯಿಂದ ಎದ್ದು ಬಿಡ ಬೇಕು ಅಂತ ಅನ್ನಿಸಿತು. ಆದರೆ ನನ್ನನ್ನು ಕಟ್ಟಿಗೆಗಳಿಂದ ಮುಚ್ಚಿದ್ದರಿಂದ ಸ್ವಲ್ಪ ಕಷ್ಟವಾಯಿತು. ಅಗ್ನಿಯ ಶಾಖಕ್ಕಿಂತ ಎದ್ದು ಓಡುವುದು ಉತ್ತಮೆವೆಂದು ಹೇಗೋ ಕಷ್ಟ ಪಟ್ಟು ಚಿತೆಯಿಂದ ಎದ್ದು ನೋಡಿದರೆ.. ನನ್ನ ಮುಖಕ್ಕೆ ಸೂರ್ಯನ ಕಿರಣಗಳು ಚುಂಬಿಸುತ್ತಾಯಿದ್ದವು. ಆಮೇಲೆ ಗೊತ್ತಾಗಿದ್ದು ಅವು ಕಟ್ಟಿಗೆಗಳಲ್ಲ.. ಕಂಬಳಿಗಳು! ಜ್ವರ ಬಂದಿರಲಿಲ್ಲ.. ಕಂಬಳಿಯ ಶಾಖಕ್ಕೆ ಮೈ ಬಿಸಿಯಾಗಿತ್ತು.
Posted By ಅಂತರ್ವಾಣಿ at 9:00 am 15 ಜನ ಸ್ಪಂದಿಸಿರುವರು